Tuesday, November 17, 2009

ಪ್ರತಿಕ್ರಿಯೆ

ನಾವು ಯಾವುದೇ ಒಂದು ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಲಿ/ಸೋಲಾಗಲಿ ಅನುಭವಿಸಿದಾಗ, ನಮ್ಮ ಹಿತೈಷಿಗಳ ಶುಭಾಶಯಗಳು/ಸಮಾಧಾನದ ನುಡಿಗಳು ನಮ್ಮಲ್ಲಿ ಏನೋ ಒಂದು ಹೊಸ ಚೇತನವನ್ನು ಮೂಡಿಸುತ್ತವೆ. ನಮ್ಮನ್ನು ಹುರಿದುಂಬಿಸುತ್ತವೆ.
ಹೀಗೆ, ನಮ್ಮ ಲೇಖನಗಳನ್ನು ಯಾರಾದರು ಓದಿ, ಅವನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದಾಗ ತುಂಬಾ ಕುಶಿಯಗುತ್ತೆ.
ಕೆಲವೊಮ್ಮೆ ಕೆಲವೊಂದು ಪ್ರತಿಕ್ರಿಯೆಗಳು ಆಶ್ಚರ್ಯವನ್ನು ಮೂಡಿಸುತ್ತವೆ.
ನಾನು ಕೆಲವು ತಿಂಗಳುಗಳ ಹಿಂದೆ ಹದಿನಾರು ಎನ್ನುವ ಲೇಖನವನ್ನು ಬರೆದಿದ್ದೆ. ಆ ಲೇಖನ ಓದಿರದಿದ್ದರೆ, ಅದನ್ನು ಮೊದಲು ಓದಿ, ನಂತರ ಈ ಲೇಖನವನ್ನು ಮುಂದುವರೆಸಿ. ಇಲ್ಲದಿದ್ದರೆ ಈ ಲೇಖನಕ್ಕೆ ಸ್ವಲ್ಪ ಸ್ವಾರಸ್ಯವಿರುವುದಿಲ್ಲ.
ನನ್ನ ಆ ಲೇಖನಕ್ಕೆ ಕ್ಷಣ ಚಿಂತನೆ: ಚಿಂತನಾಲಹರಿ... ಬ್ಲಾಗಿನ ಚಂದ್ರಶೇಖರ ಅವರು ಒಂದು ಪ್ರತಿಕ್ರಿಯೆಯನ್ನು ಬರೆದಿದ್ದರು.
ಅವರ ಪ್ರತಿಕ್ರಿಯೆ ಹೀಗಿತ್ತು ನೋಡಿ.......

`ಹದಿನಾರು' ಊರಿನ ಹೆಸರು ಕೇಳಿ ಅಚ್ಚರಿಯಾಯಿತು.
ನಾವು ಹಂಪಿಗೆ ಸುಮಾರು ವರ್ಷಗಳ ಹಿಂದೆ ಹೋಗಿದ್ದೆವು. ನಾನು ಬೆಂಗಳೂರು ಬಿಟ್ಟು ಶಿವಮೊಗ್ಗೆವರೆಗೆ ಮಾತ್ರ ಹೋಗಿದ್ದೆ. ಇದೇ ಮೊದಲ ಬಾರಿ ಹಂಪಿ, ಬಳ್ಳಾರಿ ಕಡೆ ಹೋಗಿದ್ದು. ಅಲ್ಲಿ ಒಂದು ಊರ ಹೆಸರು `ಕುಡಿತಿನಿ' ಅಂತಿತ್ತು. ಈ ಊರಿನ ಹೆಸರನ್ನು ನಮಗೆ ನಾವೇ ಹೇಳಿಕೊಂಡರೆ ಹೇಗೆ? ಅನ್ನಿಸಿತ್ತು.
ಸಸ್ನೇಹಗಳೊಂದಿಗೆ,

ಅವರ ಪ್ರತಿಕ್ರಿಯೆಯಲ್ಲಿ ಬರೆದ `ಕುಡಿತಿನಿ' ಎನ್ನುವ ಊರಿನ ಹೆಸರು ತುಂಬಾ ವಿಚಿತ್ರವಾಗಿದೆ ಅಲ್ವಾ...?
ಅದನ್ನು ಕೇಳಿ ನಿಮಗೆ ನಗು ಬಂದಿರಬೇಕು ಅಲ್ವಾ.... ?
ನಗುವ ಮುಂಚೆ ನಾನು ಹೇಳುವುದನ್ನೊಮ್ಮೆ ಕೇಳಿ...
ಇದು ನನ್ನ ಸ್ವಂತ ಊರಿನ ಹೆಸರು... ನಾನು ಹುಟ್ಟಿ ಬೆಳದ ಊರು. ಈಗಲೂ ಅದು ನನ್ನೂರು. :)
ಈಗ ನೀವು ನಗಬಹುದು... ಹ್ಹಾ ಹ್ಹಾ ಹ್ಹಾ...

ನಮ್ಮ ಊರಿನ ಹೆಸರನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕರಿಯುತ್ತಾರೆ.
ಒಬ್ಬರು 'ಕುಡತಿನಿ', ಇನ್ನೊಬ್ಬರು 'ಕುಡಿತಿನಿ', ಹಾಗೆ ಇನ್ನೂ ಕೆಲವರು 'ಕುಡ್ತಿನಿ' ಎನ್ನುತ್ತಾರೆ.
ಯಾವುದೇ ರೀತಿಯಲ್ಲಿ, ನಮ್ಮ ಊರಿನ ಹೆಸರನ್ನು ಕರೆದರೂ ನಿಮಗೆ ತಮಾಷೆಯಾಗಿಯೇ ಕಾಣಿಸುತ್ತದೆ.



Thursday, November 12, 2009

ಕುಲನಾಮ (Surname)

ಅಂದು ರಮೇಶ್, ಇಟಲಿಯಲ್ಲಿರುವ ರಾಬರ್ಟೊ ಎನ್ನುವ ವ್ಯಕ್ತಿಯೊಡನೆ ಚಾಟ್ (text - chat) ಮಾಡುತ್ತಿದ್ದ.
ನಾನು, ರಮೇಶ್, ಸತೀಶ್, ರಾಬರ್ಟೊ ಹಾಗು ಇನ್ನೂ ಹತ್ತಾರು ಜನ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡೋದು.
ಹೀಗೆ ಚಾಟ್ ಮಾಡುತ್ತಿರುವಾಗ ರಾಬರ್ಟೊ, ರಮೇಶನಿಗೆ ... 'ನಾನು ನಿನ್ನ ಒಂದು ವಯ್ಯುಕ್ತಿಕ ವಿಷಯ ಕೇಳಬಹುದೇ...?' ಎಂದ..
'ಹಾ, ಕೇಳು ರಾಬರ್ಟೊ... ಅದರಲ್ಲೇನಿದೆ...' ಎಂದ ರಮೇಶ್.
'ಸತೀಶ್... ನಿನ್ನ ಸಹೋದರನೆ.... ?' .
ಸತೀಶ್ ನಮ್ಮ ಸಹದ್ಯೋಗಿ, ಸಹೋದರನಲ್ಲ. ಆದರೆ ನಮ್ಮ ರಮೇಶನಿಗೆ, ರಾಬರ್ಟೊ ಹಾಗೆ ಯಾಕೆ ಕೇಳಿದ ಎಂದು ಅರ್ಥವಾಗಲಿಲ್ಲ. ಅವನಿಗೆ ಈ ಥರ ಆಲೋಚನೆ ಯಾಕೆ ಬಂದಿರಬಹುದು..? ಎಂದು ಆಲೋಚಿಸಿದ. ತಿಳಿಯಲಿಲ್ಲ. ಯಾಕಿರಬಹುದು ಎಂದು ಆಲೋಚಿಸುತ್ತಲೇ, ಒಂದು ಸಂದೇಶ ಕಳಿಸಿದ...
'ಯಾಕೆ ರಾಬರ್ಟೊ, ಆ ತರಹದ ಆಲೋಚನೆ ಬಂತು...?'
'ಇಲ್ಲ, ಇಬ್ಬರ Surname (ಕುಲನಾಮ) ಒಂದೇ ಇದೇ ಅಲ್ವಾ... ಅದೇ "ಕುಮಾರ್"...ಅಂತ.. "ರಮೇಶ್ ಕುಮಾರ್", "ಸತೀಶ್ ಕುಮಾರ್" ಅದಕ್ಕೆ ಹಾಗೆ ಕೇಳಿದೆ ' ಅಂದ.
ನಮ್ಮ ರಮೇಶ್, ಇದನ್ನು ಹೇಗೆ ವಿವರಿಸಿ ಹೇಳಬೇಕು ಎಂದು ಆಲೋಚಿಸುತ್ತ ನನ್ನ ಕೇಳಿದ.
ನಾನು ಇವರಿಬ್ಬರ ಸಂದೇಶಗಳನ್ನು ಓದಿದೆ. ಸ್ವಲ್ಪ ಆಲೋಚಿಸಿ ಅವರಿಗೆ ಹೀಗೆ ಸಂದೇಶ ಕಳಿಸಿದೆ...
'..."ಕುಮಾರ್" ಎನ್ನುವುದು ಕುಲನಾಮವಲ್ಲ...
ಕುಮಾರ ಎಂದರೆ ನಿಮ್ಮ ಭಾಷೆಯಲ್ಲಿ Son (ಮಗ) ಎಂದು ಅರ್ಥ..
ಇನ್ನೂ ರಮೇಶ್, ಸತೀಶ್ ಎನ್ನುವ ಹೆಸರುಗಳು, ದೇವರ ಹೆಸರುಗಳು..
ನಾವೆಲ್ಲರೂ ದೇವರ ಮಕ್ಕಳಿದ್ದಂತೆ ಅಲ್ಲವೇ...
ಹಾಗಾಗೆ ದೇವರ ಹೆಸರಿನ ಪಕ್ಕ "ಕುಮಾರ್" ಎಂದು ಸೇರಿಸಿ ಹೆಸರಿಡುತ್ತಾರೆ...
ನಿಮ್ಮಲ್ಲಿ ... ಜಾನ್ಸನ್(Johnson), ಪೀಟರ್ಸನ್ (Peterson) ಹೇಗೋ ಹಾಗೆ...' ಎಂದು ಕಳಿಸಿದೆ...
ಆಗ ರಾಬರ್ಟೊ...'ಒಹ್... ಹಾಗಾ...' ಎಂದು ಅವರ ಕೆಲವು ಹೆಸರುಗಳ ಉದಾಹರಣೆಗಳನ್ನು ಕೊಟ್ಟ.
ನಾನು, ರಮೇಶ ಒಳಗೊಳಗೇ ನಕ್ಕೆವು.

Monday, November 2, 2009

ಅಂಡರ್ಲೈನ್

ಕಾಲೇಜಿನ ಮೆಟ್ಟಿಲು ಏರಿ ಕೇವಲ ಒಂದು ತಿಂಗಳಸ್ಟೇ ಕಳದಿತ್ತು. ಕಾಲೇಜಿನಲ್ಲಿ ನಮ್ಮಂತ ಹುಡುಗರು ಹರಟೆ ಹೊಡಿತ ಕೂಡೋಕೆ ಒಂದು ಕಟ್ಟೆ ಇತ್ತು. ಹರಟೆ ಕಟ್ಟೆ ಅನ್ಕೊಲಿ. ನಾನು, ನನ್ನ ಗೆಳೆಯ ಮಂಜು ಕಟ್ಟೆಮೇಲೆ ಹರಟುತ್ತ ಕೂತಿದ್ವಿ. ದೂರದಲ್ಲಿ ನನ್ನ ಇನ್ನೊಬ್ಬ ಗೆಳೆಯ ಶಿವು(ಶಿವಪ್ರಸಾದ್ ರೆಡ್ಡಿ), ನಮ್ಮ ಕ್ಲಾಸಿನ ಒಂದು ಸುಂದರವಾದ ಹುಡುಗಿ ಸ್ನೇಹ ಜೊತೆ ಮಾತಾಡ್ತಾ ನಿಂತಿದ್ದ. ಮಾತಾಡ್ತಾ ಇದ್ದ ಅನ್ನೋದಕ್ಕಿಂತ ಕಿರುಚಾಡ್ತಾ ಇದ್ದ ಅಂತಾನೆ ಹೇಳಬಹುದು. ಒಂದೇ ಸಮನೆ ಸ್ನೇಹಳನ್ನು ಬೈಯುತ್ತಿದ್ದ. ಯಾವ ವಿಷಯಕ್ಕೆ ಸಂಬಂದಿಸಿ ಸ್ನೇಹಳನ್ನು ಬಯ್ತಾ ಇದನೋ ಅಂತ ಮಂಜನ ಕೇಳಿದೆ. ಮಂಜನಿಗೂ ಗೊತ್ತಿರ್ಲಿಲ್ಲ.
'ಏನಾದ್ರು ಲವ್ ಗಿವ್ ಮಾಡ್ತಾ ಇದಾರ....' ಅಂತ ಮಂಜನ ಕೇಳಿದೆ.
'ನನಗೆ ಗೊತ್ತಿರುವ ಹಾಗೆ, ಲವ್ ಗಿವ್ ಏನು ಇಲ್ಲ ಕಣೋ' ಎಂದ ಮಂಜ.
ಮತ್ತೆ ಯಾಕೆ ಬೈತ ಇರಬಹುದು...? ಎಂದು ತೆಲೆಕೆಡಸಿಕೊಳ್ಳುತ್ತಿರುವಾಗ, ನಮ್ಮ ಶಿವು ನಮ್ಮಲ್ಲಿಗೆ ಬಂದ. ಆ ಹುಡುಗಿ ಕಣ್ಣಿರನ್ನು ತನ್ನ ವೆಲಿನಿಂದ ವರೆಸಿಕೊಳ್ಳುತ್ತ ಕ್ಲಾಸಿನೊಳಗೆ ಹೋದಳು. ನನ್ನ ಮನಸು ಸ್ವಲ್ಪ ಕರಗಿತು. ಎಸ್ಟೆ ಆಗ್ಲಿ ನನ್ನಂತ ಹುಡುಗರ ಮನಸು ತುಂಬಾ ಮೃದು ಅಲ್ವಾ..?.
ನಾನು ಕೇಳಿದೆ.. 'ಯಾಕೋ ಸ್ನೇಹಾನ ಅಸ್ಟೊಂದು ಬೈತಾ ಇದ್ದೆ..?'
'ಹೋಗ್ಲಿ ಬಿಡೋ, ಅದನ್ಯಾಕೆ ಕೇಳ್ತಿಯಾ....' ಎಂದ.
'ಏನ್ ಹೇಳೋ...'
'ಅವಳು ನನ್ನ ನೋಟ್ಸ್ ಕೇಳಿದ್ಲು, ಕೊಟ್ಟಿದ್ದೆ...' ಎಂದ.
(ನಮ್ಮ ಕ್ಲಾಸಿನಲ್ಲಿ ಲೆಕ್ಚರರ್ ಪಾಠ ಮಾಡುತ್ತಾ ನೋಟ್ಸ್ ಬರಿಸ್ತಾ ಇದ್ರು. ನಾವು ಅವರು ಹೇಳುವ ವೇಗದಲ್ಲಿ ಬರೆದುಕೊಳ್ಳಲು ಆಗುತ್ತಿರಲಿಲ್ಲ. ಮದ್ಯ ಮದ್ಯ ಜಾಗ ಕಾಲಿ ಬಿಟು ಬಿಟ್ಟು ಬರೆದುಕೊಳ್ಳುತ್ತಿದ್ದೆವು. ಆದರೆ ನಮ್ಮ ಶಿವು, ಲೆಕ್ಚರರ್ ಎಸ್ಟೆ ವೇಗವಾಗಿ ಹೇಳಿದರೂ ಬರೆದುಕೊಳ್ಳುತ್ತಿದ್ದ. ನಾವು, ನಂತರ ಅವನ ನೋಟ್ಸ್ ತಗೊಂಡು ಜಾಗ ಕಾಲಿ ಬಿಟ್ಟಿದ್ದ ಸ್ಥಳಗಳಲ್ಲಿ ಭರ್ತಿ ಮಾಡಿಕೊಳ್ಳುತ್ತಿದ್ದೆವು.).
'ಅದಕ್ಕೆ ಏನಾಯ್ತೋ ಈಗ........?' ಎಂದೆ.
'ಕ್ಲಾಸ್ನಲ್ಲಿ ಲೆಕ್ಚರ್ ಸ್ಪೀಡ್ ಆಗಿ ನೋಟ್ಸ್ ಹೇಳುವುದನ್ನು, ನಾನು ಬರೆದುಕೊಳ್ಳುವಾಗ ನೋಟ್ಸ್'ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ (Spelling mistake) ಮಾಡಿದ್ದೆ...' ಎಂದ.
'ಅದಕ್ಕೆ ಏನಾಯ್ತು.... ?'
'ಅವಳು ನನ್ನ ನೋಟ್ಸ್ ತೆಗೆದುಕೊಂಡಿದ್ದಳು ಅಲ್ವಾ... ನಾನು ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ಪದಗಳಿಗೆಲ್ಲ ಪೆನ್ಸಿಲ್'ನಲ್ಲಿ ಕೆಳಗೆ ಅಂಡರ್ಲೈನ್ (Underline) ಮಾಡಿದಾಳೆ'.
'ಒಹ್ ಅಸ್ಟೆನಾ...? ಅದಕ್ಕೆ ಅವಳಿಗೆ ಅಸ್ಟೊಂದು ಬೈಯೋದ......?' ಎಂದು ಕೇಳಿದೆ.
'ಆದರೆ ಏನ್ ಮಾಡೋದು, ನೋಟ್ಸಿನಲ್ಲಿ ನಾನು ಬರೆದಿರುವುದಕ್ಕಿಂತ ಅವಳ Underlines ಜಾಸ್ತಿ ಇದಾವೆ...ಪ್ರತಿಯೊಂದು ಪದಕ್ಕೂ ಅಂಡರ್ಲೈನ್ ಮಾಡಿದಾಳೆ ' ಎಂದ ಸಂಕಟದಲ್ಲಿ ಹೇಳಿದ.
ನಾನು, ಮಂಜ ಇದನ್ನು ಕೇಳಿ ಬಿದ್ದು ಬಿದ್ದು ನಕ್ಕೆವು.

Tuesday, October 27, 2009

ಪಾಪ ಉಲ್ಲಾಸ

ನಿಮಗೆ ಹಿಂದೊಮ್ಮೆ ಸವಾರಿ ಲೇಖನದಲ್ಲಿ ಉಲ್ಲಾಸನ ಆವಾಂತರವನ್ನು ಹೇಳಿದ್ದೆ. ಈಗ ನಮ್ಮ ಅದೇ ಉಲ್ಲಾಸನ ಇನ್ನೊಂದು ನೆನಪಿನ ಪುಟ ನಿಮಗಾಗಿ.
ಉಲ್ಲಾಸ್ ಗುಲ್ಬರ್ಗದಲ್ಲಿ ಓದುತ್ತಿರುವಾಗ, ಅಲ್ಲೇ ವಾಸವಾಗಿದ್ದ ತನ್ನ ಹಳೆಯ ಸಂಬಂಧಿಕರ ಮನೆಗೆ ಮಾತನಾಡಿಸಲು, ಮೊದಲ ಬಾರಿ ಅವರ ಮನೆಗೆ ಹೋದ. ಅವರು ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ಇಂದು ಇಲ್ಲೇ ಊಟ ಮಾಡಿ ಹೋಗು ಎಂದು ಬಲವಂತ ಮಾಡಿದರು. ನಮ್ಮ ಉಲ್ಲಾಸನಿಗೂ ದಿನಾಲೂ ಹೋಟೆಲ್ ಊಟ ಮಾಡಿ ಬೇಸರವಾಗಿತ್ತು. ಸರಿ ಆಯ್ತು ಮಾಡಿ ಹೋಗ್ತೀನಿ ಎಂದು ಹೇಳಿದ.
ಬಿಸಿ ಬಿಸಿ ಆಡುಗೆ ಸಿದ್ದ ಮಾಡಿದರು. ಅವರೆಲ್ಲರ ಜೊತೆ ನಮ್ಮ ಉಲ್ಲಾಸ ಊಟಕ್ಕೆ ಕೂತ. ಮೊದಲು ರೊಟ್ಟಿ ಪಲ್ಯ ಊಟ. ನಮ್ಮ ಉಲ್ಲಾಸನಿಗೆ ರೊಟ್ಟಿ ತಿನ್ನೋ ಅಭ್ಯಾಸ ಇರ್ಲಿಲ್ಲ. ಆದರೂ ಒಂದು ರೊಟ್ಟಿ ತಿಂದ. ನಂತರ ಅನ್ನ ಬಡಿಸಲು ಅವರ ಮನೆಯವರು ಮುಂದಾದರು. ಆದರೆ ಅನ್ನ ಸ್ವಲ್ಪ ಸೀದಿಹೊಗಿತ್ತು (ಒತ್ತಿ ಹೋಗಿತ್ತು, ಒತ್ತಿತ್ತು). ಅವರ ಮನೆಯವರು ಉಲ್ಲಾಸನಿಗೆ ಅನ್ನ ಸೀದಿರುವ ಸಂಗತಿ ಹೇಳಿ, ಕ್ಷಮೆ ಕೇಳಿ, ರೊಟ್ಟಿನೆ ತಗೋಳಿ ಎಂದರು. ನಮ್ಮ ಉಲ್ಲಾಸನಿಗೆ ಅನ್ನ ತಿನ್ನದೇ ಇದ್ದರೆ, ಊಟ ಮಾಡಿದ ಹಾಗೆ ಆಗುವುದಿಲ್ಲ. ಮೊದಲೇ ರೊಟ್ಟಿ ತಿನ್ನುವ ಅಭ್ಯಾಸವಿಲ್ಲ. ಅನ್ನ ಸೀದಿದ್ದರು ಸರಿ, ಅದನ್ನೇ ತಿನ್ನೋಣ ಎಂದು ಮನಸ್ಸಿನಲ್ಲಿ ಅಂದುಕೊಂಡು, ಅವರಿಗೆ ಒಂದು ಸುಳ್ಳು ಹೇಳಿದ.
'ನನಗೆ ಸೀದಿರುವುದೆಂದರೆ ತುಂಬಾ ಇಷ್ಟ, ನನಗೆ ಅದನ್ನೇ ಬಡಿಸಿ' ಎಂದ.
ಅವರ ಮನೆಯವರು ಸ್ವಲ್ಪ ನಿಟ್ಟುಸಿರು ಬಿಟ್ಟು, ಅದನ್ನೇ ಬಡಿಸಿದರು. ನಮ್ಮ ಉಲ್ಲಾಸ ಸ್ವಲ್ಪ ಕಷ್ಟ ಪಟ್ಟು ಊಟ ಮಾಡಿದ. ಊಟವಾದ ನಂತರ ಅವರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದ.

೨ ವರ್ಷಗಳ ನಂತರ.........

ಮತ್ತೊಮ್ಮೆ ನಮ್ಮ ಉಲ್ಲಾಸನಿಗೆ, ಅವರ ಮನೆಗೆ ಹೊಗಿಬರಬೇಕಾದ ಪ್ರಸಂಗ ಬಂತು. ಮತ್ತೊಮ್ಮೆ ಅವರ ಮನೆಗೆ ಹೋದ.
'ಇಲ್ಲೇ ಓದ್ತಾ ಇದ್ರು, ಅವಾಗವಾಗ ಮನೆಗೆ ಬರ್ತಾ ಇರಬಾರದ.. ?' ಎಂದು ಅವರ ಮನೆಯವರು ಕೇಳಿ, ಮತ್ತೊಮ್ಮೆ ಅತ್ಮಿಯತೆಯಿಂದ ಮಾತನಾಡಿಸಿದರು. ಬಂದ ಕೆಲಸವಾದ ನಂತರ, ನಾನು ಹೋಗಿಬರ್ತೀನಿ ಎಂದು ಹೇಳಿ, ಎದ್ದು ನಿಂತ.
'ಹೇ, ಕೂತ್ಕೊಳೋ, ಊಟ ಮಾಡ್ಕೊಡು ಹೋಗು...' ಎಂದರು.
ಬೇಡವೆಂದರೂ, ಬಲವಂತ ಮಾಡಿದರು. ನಮ್ಮ ಉಲ್ಲಾಸ ಅವರೆಲ್ಲರ ಜೊತೆ ಊಟಕ್ಕೆ ಕೂತ. ಮತ್ತದೇ ರೊಟ್ಟಿ ಪಲ್ಯ. ಇಷ್ಟವಿಲ್ಲದಿದ್ದರೂ ಒಂದು ರೊಟ್ಟಿ ತಿಂದ. ನಂತರ ಅನ್ನ ಬಡಿಸಲು ಮುಂದಾದರು..
ನಮ್ಮ ಉಲ್ಲಾಸನದು, ಏನು ಕೆಟ್ಟ ಹಣೆಬರಹವೋ ಏನೋ... ಇವತ್ತು ಕೂಡ ಅನ್ನ ಸೀದಿತ್ತು...
ಅದನ್ನು ಗಮನಿಸಿದ ಮನೆಯವರು 'ಅನ್ನ ಸೀದಿದೆ...' ಎಂದರು.
ಅವರ ಮನೆಯಲ್ಲಿರುವ ಇನ್ನೊಬ್ಬ ವ್ಯಕ್ತಿ... 'ಒಹ್, ಅನ್ನ ಸೀದಿದೆಯ... ? ನಮ್ಮ ಉಲ್ಲಾಸನಿಗೆ ಸೀದಿರೋದು ಅಂದ್ರೆ ತುಂಬಾ ಇಷ್ಟ. ಅವನಿಗೆ ಬಡಿಸಿ...' ಎಂದರು.
ನಮ್ಮ ಉಲ್ಲಾಸ ಮನದಲ್ಲೇ ಕೊರಗಿದ. ಅವತ್ತು ನಾನು ಹೇಳಿದ ಸುಳ್ಳಿನಿಂದ ಇವತ್ತು ಕೂಡ ನನಗೆ ಸೀದಿರುವ ಊಟ... :(
ಆ ಮನೆಯವರು ನಮ್ಮ ಉಲ್ಲಾಸನಿಗೆ ಸೀದಿರುವುದು ಇಷ್ಟವೆಂದು ತಿಳಿದ ಬಳಿದ, ಕೆಳಗೆ ಸೀದಿರುವುದನ್ನೆಲ್ಲ ಹುಡುಕಾಡಿ ಬಡಿಸಿದರು.
ಪಾಪ, ನಮ್ಮ ಉಲ್ಲಾಸನಿಗೆ ಬೇರೆ ದಾರಿಯಿಲ್ಲದೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ತಿಂದ..

Wednesday, October 21, 2009

ಸವಾರಿ, ನನ್ನವಳ ಜೊತೆಗೆ...

ನಾನು, ಸ್ನೇಹ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾಳೆ ಅವಳ ಹುಟ್ಟುಹಬ್ಬ. ಹೇಗಾದರೂ ಮಾಡಿ, ನಾಳೆ ಅವಳ ಜೊತೆ ಒಂದೆರೆಡು ಗಂಟೆ ಎಲ್ಲಾದರೂ ಸುಂದರವಾದ ಪ್ರದೇಶದಲ್ಲಿ ಕುಳಿತು ಮಾತನಾಡುವ ಮನಸಾಯಿತು. ಅವಳ ಒಪ್ಪಿಗೆ ಪಡೆಯಲು ಫೋನಾಯಿಸಿದೆ.
'ಹಾಯ್ ಸ್ನೇಹ'
'ಹಾಯ್ ಶಿವು'
'ನಾಳೆ ಎಲ್ಲಾದರೂ ಪಿಕ್ನಿಕ್ ಹೋಗೋಣ್ವಾ ?'
'Sorry ಕಣೋ, ನಾಳೆ ಆಗೋಲ್ಲ...'
'ಪ್ಲೀಸ್ ಕಣೆ....'
'ಯಾಕೆ ನಾಳೆ... ?, ಬೇಕಂದ್ರೆ ನಾಡಿದ್ದು ಹೋಗೋಣ. ನಾಳೆ ನನಗೆ ಸ್ವಲ್ಪ ಕೆಲಸ ಇದಾವೆ'.
ನನಗೆ ಗೊತ್ತಾಯ್ತ. ನನ್ನ ಚೂಡಯಿಸಲೆಂದೇ ಈ ಥರ ಪ್ರಶ್ನೆ ಮಾಡ್ತಾ ಇದಾಳೆ. ಆದರೂ ಮುಂದುವರೆಸಿದೆ.
"ನಾಳೆನೆ ಯಾಕೆ ಅಂತ ನಿನಗೆ ಗೊತ್ತಿಲ್ವಾ ?? ' ಅಂತ ಕೇಳಿದೆ.
'ಇಲ್ಲಪಾ, ನನಗೆ ಗೊತ್ತಿಲ್ಲ' ಅಂದ್ಲು.
'ನೀನು ಕಳ್ಳಿ, ಗೊತ್ತಿದ್ರು Acting ಮಾಡ್ತಿಯ...ಇರಲಿ ಇರಲಿ... ನಾನೇ ಹೇಳ್ತೀನಿ... ನಾಳೆ ನಿನ್ನ ಹುಟ್ಟು ಹಬ್ಬ ಅಲ್ವಾ...' ಅಂತೇಳಿ ಗುಟ್ಟು ಬಿಟ್ಟು ಕೊಟ್ಟೆ.
'ಹ್ಹಾ ಹ್ಹಾ ಹ್ಹಾ... ನನಗೆ ಗೊತ್ತಿತ್ತು' ಅಂತ ಹೇಳಿ ನಗಲು ಶುರುಮಾಡಿದಳು.
ಅದರಲ್ಲಿ ಅಂತ ಜೋಕ್ ಏನಿತ್ತೋ ಅಂತ ನನಗೆ ಗೊತ್ತಿಲ್ಲ.
'ಸರಿ. ನೀನೆ ಗೆದ್ದಿದಿಯ. ನಾಳೆ ಪಿಕ್ನಿಕ್ ಹೋಗೋಣ್ವಾ...?' ಅಂತ ಕೇಳಿದೆ.
'ನಾಳೆ ಕಷ್ಟ ಕಣೋ. ಆಗೋಲ್ಲ. ನಾಳೆ ಮಧ್ಯಾನ ಕೆಲವು ಅಥಿತಿಗಳು ನನ್ನ ಮನೆಗೆ ಬರ್ತಾ ಇದಾರೆ. ಹಾಗಾಗಿ ಮನೆಯಲ್ಲೇ ಇರ್ಬೇಕು..." ಅಂದ್ಲು.
'ಬೆಳಿಗ್ಗೆ ಐದು ಗಂಟೆಗೆ ನೀನು ಜಾಗಿಂಗ್ ಹೋಗ್ತಿಯ ಅಲ್ವಾ... ನಾನು ನಾಳೆ ಬೆಳಿಗ್ಗೆ ನಿಮ್ಮ ಮನೆ ಹತ್ರ ಬರ್ತೀನಿ. ಇಬ್ಬರು ಆಲ್ಲಿಂದ ನನ್ನ ಬೈಕ್ನಲ್ಲಿ ಹೋಗೋಣ.. ಓಕೆ ನಾ..?' ಅಂದೆ.
'ಸರಿ ಬರ್ತೀನಿ. ಆದರೆ ಬೆಳಿಗ್ಗೆ ಏಳು ಗಂಟೆಗೆಲ್ಲ ವಾಪಾಸ್ ಬರಬೇಕು.. ಓಕೆ ನಾ.. ?'
'ಆಯ್ತು ಮೇಡಂ...ನೀವು ಹೇಗೆ ಹೇಳ್ತಿರೋ, ನಾವು ಹಾಗೆ ಕೇಳ್ತಿವಿ..ಸದಾ ನಿಮ್ಮ ಸೇವಯಲ್ಲಿ....'
'ನಾಳೆ ಸಿಗು, ವಿಚಾರ್ಸಿಕೊಳ್ತಿನಿ.. ಹ್ಹಾ ಹ್ಹಾ ಹ್ಹಾ... bye' ಅಂತ ಹೆದರಿಸಿ ಫೋನ್ ಇಟ್ಟಳು.

ನಾಳೆ ಬೆಳಿಗ್ಗೆ ಬೇಗ ಏಳಬೇಕಾದುದರಿಂದ, ಬೇಗ ಮಲಗಿದೆ. ಮಲಗಿದ್ದೇನೋ ನಿಜ. ಆದರೆ ಸರಿಯಾಗಿ ನಿದ್ದೆ ಬರ್ಲಿಲ್ಲ. ರಾತ್ರಿ ಹನ್ನೆರೆಡು ಗಂಟೆಗೆ ಅವಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಫೋನಿನಲ್ಲಿ ತಿಳಿಸಿದೆ. ಅಂತು ಇಂತು, ಅಲ್ಪ ಸ್ವಲ್ಪ ನಿದ್ದೆ ಮಾಡಿ, ಬೆಳಿಗ್ಗೆ ಬೇಗ ಎದ್ದೆ. ನನ್ನ ಪ್ರಕಾರ ಬೆಳಿಗ್ಗೆ ಬೇಗ ಏಳೋದು ಅಂದರೆ ಒಂದು ಸಾಧನೆ. :P
ನಾನು ನಾಲ್ಕುವರೆಗೆ ಅವಳ ಮನೆಯಮುಂದೆ ಹೋಗಿ ನಿಂತು ಅವಳಿಗೆ ಫೋನ್ ಮಾಡಿ, ನಾನು ಬಂದಿರುವೆನೆಂದು ತಿಳಿಸಿದೆ. ಅವಳು ಕೂಡ ನನಗಾಗಿ ಕಾಯ್ತಾ ಇದ್ಲು, ನಾನು ಫೋನ್ ಮಾಡಿದೊಡನೆ ಮನೆಯಿಂದ ಹೊರಗಡೆ ಬಂದಳು. ಅವಳು ಜಾಗಿಂಗ್ ಡ್ರೆಸ್'ನಲ್ಲಿ ಬರ್ತಾ ಇದ್ಲು. ಮುಂಜಾನೆಯ ನಸುಕಿನಲ್ಲಿ ಅವಳ ಮುಖ ಚಂದ್ರನಂತೆ ಕಂಗೊಳಿಸ್ತಾ ಇತ್ತು. ಅವಳು ತುಂಬಾ ತುಂಬಾ ತುಂಬಾ ಸುಂದರವಾಗಿ ಕಾಣುತ ಇದ್ದಳು. ಜಾಗಿಂಗ್ ಡ್ರೆಸ್ ಹಾಕಿಕೊಂಡಿದ್ದರಿಂದ ಇನ್ನಸ್ಟು ಸುಂದರವಾಗಿ ಕಾಣ್ತಾ ಇದಳೋ ಏನೋ ಗೊತ್ತಿಲ್ಲ. ಅವಳು ನಡೆದು ನನ್ನ ಹತ್ತರ ಬಂದ್ಲು. ನಾನು ಅವಳನ್ನೇ ನೋಡ್ತಾ ಇದ್ದೆ. ಹತ್ತಿರ ಬಂದು ನನ್ನ ಅಲ್ಲಾಡಿಸಿ ಕೇಳಿದಳು... 'ಯಾಕೆ ಹಾಗೆ ನೋಡ್ತಾ ಇದಿಯಾ..?'
'ನೀನು ಇವತ್ತು ತುಂಬಾ ಸುಂದರವಾಗಿ ಕಾಣಿಸ್ತಾ ಇದಿಯ. ನಿನ್ನ ಹಾಗೆ ನೋಡ್ತಾನೆ ಇರ್ಬೇಕು ಅನ್ಸುತ್ತೆ.' ಅಂದೆ.
ಸಾಕು ಸಾಕು ಅಂತ ಹೇಳಿ ನನ್ನ ಗಲ್ಲ ತಿವಿದು, ನನ್ನ ಹಿಂದೆ ಬೈಕ್ ಹತ್ತಿ ಬಿಗಿದಪ್ಪಿಕೊಂಡು ಕುಳಿತಳು. ಇನ್ನು ನಮ್ಮ ಪಯಣ ಮುಂದುವರೆಯಿತು.
ಸ್ನೇಹ: 'ಎಲ್ಲಿಗೆ ಹೋಗ್ತಾ ಇದಿವಿ...?'
ನಾನು 'Secret' ಅಂತ ಹೇಳಿದೆ.
ಕಾಲಿ ಕಾಲಿ ರಸ್ತೆಯಲ್ಲಿ ಸವಾರಿ ಹೊರಟಿತ್ತು.

ಮುಂಜಾನೆಯ ಮಂಜಿನಲಿ,
ತಂಪಾದ ಚಳಿಯಲಿ,
ನಾ ಬೈಕ್ ನಡೆಸುತಿರುವಾಗ,
ನೀ ಹಿಂದಿನಿಂದ ಬಿಗಿದಪ್ಪಿಕೊಂಡಿರಲು,
ಇನ್ನೇನು ಬೇಕು ಈ ಜಗದಲಿ,
ನನ್ನೀ ಪುಟ್ಟ ಪ್ರೀತಿಸುವ ಹೃದಯಕೆ.... :)

ಒಂದು ಸುಂದರವಾದ ಬೆಟ್ಟಕ್ಕೆ ಅವಳನ್ನು ಕರೆದೊಯ್ದೆ. ಇಬ್ಬರು ಬೆಟ್ಟವನ್ನು ಹತ್ತಿದೆವು. ಬೆಟ್ಟದ ತುದಿಯಲಿ ನಾನು ಅವಳು ಅಸ್ಟೆ. ಬೆಟ್ಟದ ತುದಿಯಲಿ ನಿಂತು ಚಲಿಸುವ ಮೋಡಗಳನ್ನೊಮ್ಮೆ ನೋಡಿ 'Wow... Beautiful...' ಎಂದು ಕೂಗಾಡಿದಳು. ಸಂತೋಷದಿಂದ ಬೀಗಿದಳು. ನನ್ನ ಚಲುವೆ ಸಂತೋಷವಾಗಿರುವುದಕ್ಕಿಂತ ಇನ್ನೇನು ಬೇಕು ನನಗೆ. ಅವಳ ಸಂತೋಷವೇ ನನ್ನ ಸಂತೋಷ. ನಾನು ತಂದಿದ್ದ ಪುಟ್ಟದಾದ ಗಿಫ್ಟ್ ಪೊಟ್ಟಣವನ್ನು ಅವಳ ಕೈಗಿಡುತ್ತಾ... 'ಹ್ಯಾಪಿ ಬರ್ತ್ಡೇ ಟು ಯು..' ಅಂದೆ. ಅವಳು ಸಂತೋಷದಿಂದ ಗಿಫ್ಟ್ ಪೊಟ್ಟಣವನ್ನು ತೆಗೆದುಕೊಳ್ಳುತ್ತಾ ಬಿಗಿಯಾಗಿ ಅಪ್ಪಿಕೊಂಡು ಸಿಹಿ ಮುತ್ತೊಂದನು ನನ್ನ ಕೆನ್ನೆಗಿಡುತ್ತಾ 'ಥ್ಯಾಂಕ್ ಯು' ಎಂದಳು. ನಾನು ಅವಳು ಕೊಟ್ಟ ಸಿಹಿ ಮುತ್ತಿಗೆ 'ಥ್ಯಾಂಕ್ ಯು' ಹೇಳಿದೆ. :P

ಬೆಟ್ಟದ ತುದಿಯಲಿ,
ಮೋಡದ ಮರೆಯಲಿ,
ನಿನ್ನದೇ ಧ್ಯಾನದಲಿ ಮುಳುಗಿರುವಾಗ,
ನನ್ನ ಕೆನ್ನೆಗೆ ನೀನೊಂದು ಸಿಹಿಮುತ್ತು ಕರುಣಿಸಿರಲು,
ಇನ್ನೇನು ಬೇಕು ಈ ಜಗದಲಿ,
ನನ್ನೀ ಪುಟ್ಟ ಪ್ರೀತಿಸುವ ಹೃದಯಕೆ.... :)


ಹೀಗೆ ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕುಳಿತಿದ್ದೆವು. ಸಮಯ ಜಾರತೊಡಗಿತು. ಅವಳು ಎಚ್ಚರವಾಗಿ...
'ಅಯ್ಯೋ... ಲೇಟ್ ಆಗುತ್ತೆ ಹೋಗೋಣ...' ಅಂದ್ಲು.
'ಆಯ್ತು ಹೋಗೋಣ...' ಅಂತ ಹೇಳಿ ಎದ್ದು ನಿಂತೆ.
'ಇಲ್ಲಿ ಇರಬೇಕು ಅನ್ಸುತ್ತೆ ಅಲ್ವಾ... ' ಅಂದ್ಲು.
'ಹು' ಅಂದೆ.
'ಇನ್ನೊಂದ್ಸಾರಿ ಮತ್ತೆ ಬರೋಣವಾ.. ?' ಅಂದ್ಲು.
'ನೀನು ಯಾವಾಗ ಅಂದ್ರೆ ಅವಾಗ ಬರೋಣ...' ಅಂದೆ.
ಇನ್ನೊಂದು ಸಿಹಿಮುತ್ತು ಕೊಟ್ಳು.
ಆ ಮುತ್ತಿನ ಮತ್ತಿನಲಿ ತೇಲುತ 'ಸಿಹಿಮುತ್ತು ಸಿಹಿಮುತ್ತು ಇನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು' ಎಂದು ಅವಳನ್ನು ಚೂಡಾಯಿಸುತ, ಬೈಕ್ ಹತ್ತಿ ವಾಪಾಸ್ ಅವಳ ಮನೆಹತ್ತಿರ ಬಂದಾಗ, ಬೆಳಿಗ್ಗೆ ಏಳು ಗಂಟೆ ಆಗಿತ್ತು. ಅವಳು ನನಗೆ Bye ಹೇಳಿ, ಮನೆಕಡೆ ನಡೆದಳು.
ಅವಳು ಮರೆಯಾಗುವವರೆಗೂ ಅಲ್ಲೇ ಕಾಯುತ್ತ ನಿಂತೆ......
ನನ್ನ ಆಲಾರಂ ಜೋರಾಗಿ ಹೊಡೆಯಲು ಶುರು ಮಾಡಿತು. ಸದ್ದು ಕೇಳಲಾಗದೆ ಎದ್ದೆ. ಮನಸಿನಲ್ಲಿ ಒಂದು ಚಿಕ್ಕ ಬೇಜಾರು ಮೂಡಿತು...
'ಅಯ್ಯೋ ಇದು ಕನಸೇ... :('.

Monday, October 12, 2009

ಸಾಗುತ ದೂರ ದೂರ...



ಮೂರು ವರ್ಷಗಳ ಹಿಂದೆ ನಡೆದ ಘಟನೆ.
ನಾನು ಹಾಗು ನಟ ಇಬ್ಬರು ಸೇರಿ ಬೆಂಗಳೂರಿನಿಂದ ಬಳ್ಳಾರಿಗೆ ಹೋಗಬೇಕಾಗಿತ್ತು. ಬಳ್ಳಾರಿ ಹತ್ತಿರ ಇರುವ 'ಕುಡತಿನಿ' ನನ್ನ ಊರು. ಆದರೆ ನಾವು ಹೋಗುತ್ತಿದ್ದುದು ಬೇರೆ ಕೆಲಸದ ನಿಮಿತ್ತ. ಅಲ್ಲಿ ಸ್ವಲ್ಪ ಸುತ್ತುವ ಕೆಲಸಗಳಿದ್ದರಿಂದ, ತಿರುಗಾಡಲು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋದರೆ ಒಳಿತು ಎಂದು ನಿರ್ಧರಿಸಿದೆವು. ೩೦೦ ಕಿಲೋಮೀಟರುಗಳ ಪ್ರಯಾಣವನ್ನು ಬೈಕಿನಲ್ಲೇ ಮಾಡಲು ಸಜ್ಜಾದೆವು. ಜೀವನದಲ್ಲಿ ಮೊದಲಬಾರಿಗೆ, ಬೈಕಿನಲ್ಲಿ ಇಷ್ಟು ದೂರದ ಪ್ರಯಾಣ ಮಾಡ್ತಾ ಇರೋದು. ಬೆಂಗಳೂರನ್ನು ಬೆಳಗಿನಜಾವ ಬಿಡುವ ಯೋಚನೆ ಮಾಡಿದ್ರು. ಕೆಲವು ಸಣ್ಣ ಪುಟ್ಟ ಕೆಲಸಗಳು ಇದ್ದುದರಿಂದ, ನಾವು ಬಿಡುವುದು ತಡವಾಯಿತು. ನಾವು ಬೆಂಗಳೂರು ಬಿಟ್ಟಾಗ ಮಧ್ಯಾನ ೪ ಗಂಟೆ. ಬೆಂಗಳೂರು ದಾಟುವುದರೊಳಗೆ ಒಂದು ಗಂಟೆ ಜಾರಿ ಹೋಯಿತು. ನಾವು ತುಮಕೂರು ಸೇರಿದಾಗ ಸಮಯ ಸಂಜೆ ೬ ಗಂಟೆ.

ಆಗಸದ ಸೂರ್ಯನಿಗೆ ಅವತ್ತು ಏನು ಕೆಲಸವಿತ್ತೇನೋ..?..
ಸ್ವಲ್ಪ ಬೇಗಾನೆ ಮರೆಯಾಗಲು ಶುರು ಮಾಡಿದ...
ಸರಿ, ತುಮಕೂರಿನಲ್ಲಿ ಒಂದು ಕಪ್ ಟೀ ಕುಡಿದು, ಸ್ವಲ್ಪ ವಿಶ್ರಾಂತಿ ಪಡೆದು ಮುಂದುವರೆದೆವು.
ಸೂರ್ಯ ಮರೆಯದಂತೆ, ಕತ್ತಲು ಕವಿಯಾಲರಂಬಿಸಿತು. ಬೈಕಿನ ಹೆಡ್ ಲೈಟ್ ಹೊತ್ತಿಸಿದೆವು. ಅದೇನು ತೊಂದರೆಯಾಗಿತ್ತೋ ಏನೋ ಹೆಡ್ ಲೈಟ್ ನಿಂದ ಬೆಳಕು ತುಂಬಾ ಕಡಿಮೆ ಬರುತ್ತಿತ್ತು..ಅದನ್ನು ಹಾಕುವುದು ಒಂದೇ. ಹಾಕದಿರುವುದು ಒಂದೇ. ಮುಂಚೆ ಎಲ್ಲ ಸರಿಯಾಗಿತ್ತು. ಇದ್ದಕ್ಕಿದ್ದ ಹಾಗೆ ಈ ಹೆಡ್ ಲೈಟ್ ಕೈಕೊಟ್ಟಿದೆ. ಕತ್ತಲದಂತೆ ಮುಂದೆ ಏನು ಕಾಣಿಸದಾಯ್ತು. ಹಾಗೆ ನಿಧಾನವಾಗಿ ರಸ್ತೆಯಲ್ಲಿ ಬಿಡಿಸಿದ ಬಿಳಿಪಟ್ಟಿಯ ಮೇಲೆ ನಾನೊಂದು ೫೦ ಕಿಲೋಮೀಟರು ನಡೆಸೋದು, ಅವನೊಂದು ೫೦ ಕಿಲೋಮೀಟರು ನಡೆಸೋದು.. ಹೀಗೆ "ಸಾಗುತ ದೂರ ದೂರ......, ಬಾ ಬಳ್ಳಾರಿ ಬೇಗ....."

ಬಳ್ಳಾರಿಗೆ ಇನ್ನು ೪೦ ಕಿಲೋಮೀಟರು ಬಾಕಿಯಿತ್ತು. ಆಗ ಸಮಯ ರಾತ್ರಿ ೧೨ ಗಂಟೆ. ಕೆಲವು ಪೊಲೀಸರು ರಸ್ತೆಯಲ್ಲಿ ಹೋಗಿಬರುತ್ತಿದ್ದ ವಾಹನಗಳ ವಿಚಾರಣೆ ನಡೆಸುತ್ತ ನಿಂತಿದ್ದರು. ಹಾಗೆ ನಮ್ಮ ಬೈಕನ್ನು ನಿಲ್ಲಿಸಿದರು. ಗಾಡಿಯ ಪುಸ್ತಕ ಹಾಗು ಗಾಡಿ ನಡೆಸುತ್ತಿದ್ದ ನನ್ನ ಲೈಸನ್ಸ್ ಕೇಳಿದ್ರು. ಕೊಟ್ವಿ. ಎಲ್ಲ ಸರಿಯಾಗಿ ಇತ್ತು..
"ಯಾಕೆ ಇಷ್ಟು ಹೊತ್ತಿನಲ್ಲಿ ಹೋಗ್ತಾ ಇದ್ದೀರಾ...?"
ನಾವು ಸಮಂಜಸವಾದ ಕಾರಣಗಳನ್ನು ಕೊಟ್ಟೆವು.
ಆಗ ಅವರು... "ಸರಿ, ಇಷ್ಟು ಹೊತ್ತಿನಲ್ಲಿ ಹೋಗೋದು ಸೂಕ್ತವಲ್ಲ, ಇದು ಹೈವೆ (ಹೆದ್ದಾರಿ).. ಬಹಳ ಹುಷಾರ್ ಆಗಿ ಹೋಗ್ಬೇಕು. ಮುಂದೆ ಸ್ವಲ್ಪ ಡೇಂಜರ್ ದಾರಿ ಇದೆ. ನಿಧಾನವಾಗಿ ನೋಡ್ಕೊಂಡು ಹೋಗಿ.." ಎಂದು ಸಲಹೆಯನಿತ್ತರು.
ನಾವು "ಸರಿ ಸರ್" ಎಂದು ಹೇಳಿ.. ನಮ್ಮ ಪಯಣ ಮುಂದುವರೆಸಿದೆವು.

ನಾನು ತುಂಬಾ ನಿಧಾನವಾಗಿ ಗಾಡಿ ನಡೆಸುತ್ತಿದ್ದೆ..
ಹಿಂದೆ ಕೂತಿದ್ದ ನಟ.... "ಲೋ, ಸ್ವಲ್ಪ ಜೋರಾಗಿ ನಡೆಸೋ...ಬೇಗ ಊರು ತಲುಪೋಣ"
ನಾನು : "ನಟ, ಮುಂದೆ ಏನು ಕಾಣಿಸ್ತಾ ಇಲ್ಲ... ಜೋರಾಗಿ ನಡೆಸೋದು ಕಷ್ಟ..."
ನಟ : "ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೇನೇ....., ಬಿಡು ನಾನೇ ನಡೆಸ್ತೀನಿ..."
ಸರಿ, ನೀನೆ ನಡೆಸು ಬಾ ಅಂತ ಹೇಳಿ ನಾನು ಹಿಂದಕ್ಕೆ ಕುಳಿತೆ.
ಈಗ ನಟ ಗಾಡಿ ನಡೆಸಲು ಶುರು ಮಾಡಿದ.
ಒಂದು ೨ ಕಿಲೋಮೀಟರು ಇದ್ದದ್ರಲ್ಲೇ ಜೋರಾಗಿ ಗಾಡಿ ಸಾಗ್ತಾ ಇತ್ತು...
ಏನಾಯ್ತೋ ಗೊತ್ತಿಲ್ಲ.. ಇಬ್ಬರು ಇದ್ದಕಿದ್ದ ಹಾಗೆ ಮದ್ಯರಸ್ತೆಯಲ್ಲಿ ಬಿದ್ದುಬಿಟ್ಟೆವು...
ಸುತ್ತ ಮುತ್ತ ಒಂದು ನರಪ್ರಾಣಿ ಸಹಿತ ಇಲ್ಲ. ಸುತ್ತಲು ಬರಿ ಕತ್ತಲು ಮಾತ್ರ ಕಾಣಿಸ್ತಿದೆ.
ಹೆದ್ದಾರಿಯ ರಸ್ತೆ ಮದ್ಯದಲ್ಲಿ ಇಬ್ಬರು ಅನಾಥರಾಗಿ ಬಿದ್ದಿದಿವಿ.
ನಟನಿಗೆ ಜಾಸ್ತಿ ಪೆಟ್ಟಾಗಿತ್ತು. ನನಗೂ ಸ್ವಲ್ಪ ಪೆಟ್ಟಾಗಿತ್ತು.
ನಾನು ಬೇಗನೆ ಎದ್ದು, ನಟನನ್ನು ಎಬ್ಬಿಸಿ, ಬೈಕನ್ನು ರಸ್ತೆಯ ಪಕ್ಕಕ್ಕೆ ತಂದು ನಿಲ್ಲಿಸಿದೆ.
ಸ್ವಲ್ಪ ಸಮಯ ನಟನಿಗೆ "ಏನಾಯ್ತು..?" ಎನ್ನುವ ಪ್ರಜ್ಞೆ ಸಹಿತ ಇರಲಿಲ್ಲ. ನಂತರ ನಿಧಾನವಾಗಿ ಚೇತರಿಸಿಕೊಂಡ.
ರಸ್ತೆಯ ಮೇಲೆ ದೊಡ್ಡ ಹುಲ್ಲಿನ ಬಣವೆ ಹಾಕಿದ್ದರು. ಆ ಹುಲ್ಲಿನ ರಾಶಿ ಅರ್ಧ ರಸ್ತೆಯನ್ನು ಆಕ್ರಮಿಸಿತ್ತು. ಆ ಹುಲ್ಲಿನ ರಾಶಿಯು ನಮ್ಮ ಬೈಕಿನ ಒಂದು ಭಾಗವನ್ನು ತಾಕಿದ್ದರಿಂದ ನಾವು ರಸ್ತೆಯಲ್ಲಿ ಬಿದ್ದದ್ದು ಎಂದು ತಿಳಿಯುತು.
ಈ ಅನಾಹುತದ ನಂತರ, ನಟ ಮತ್ತೆ ಬೈಕ್ ನಡೆಸುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಬಹಳ ಗಾಯಗಳಾಗಿದ್ದವು.
ನಾನೇ ಗಾಡಿ ನಡೆಸಲು ಶುರು ಮಾಡಿದೆ. ನಟ ಹಿಂದೆ ಕೂತಿದ್ದ.
ನಾನು ಈಗ ತುಂಬಾ ತುಂಬಾ ನಿಧಾನವಾಗಿ ಜಾಗುರತೆಯಿಂದ ಬೈಕ್ ನಡೆಸುತ್ತಿದ್ದೆ.
ಹಿಂದಿನಿಂದ ನಟ, ನನ್ನ ಬುಜವನ್ನು ಒತ್ತಿ ಹಿಡಿದು ಹೇಳಿದ... "ಲೋ......"
ನಾನು : "ಏನೋ..."
ನಟ : "ನಿಧಾನವಾಗಿ ನಡೆಸೋ..."
ನಾನು ತುಂಬಾ ತುಂಬಾ ನಿಧಾನವಾಗಿ ಬೈಕ್ ನಡೆಸುತ್ತಿದ್ದೆ. ನನ್ನ ಗಾಡಿ ಬಹುಶ ೫ ಕಿಲೋಮೀಟರು ವೇಗದಲ್ಲಿ ಹೋಗುತ್ತಿತ್ತು ಅನ್ಸುತ್ತೆ.
ನಾನು : "ಲೋ ನಟ, ನಾನು ತುಂಬಾ ನಿಧಾನವಾಗೆ ನಡಿಸ್ತಾ ಇದೀನಿ.. ಇದಕ್ಕಿಂತ ನಿಧಾನಾನ...?"
ನಟ : "ಲೋ, ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ, ಅಸ್ಟು ನಿಧಾನವಾಗಿ ಹೋಗು..ಸ್ವಲ್ಪ ನನ್ನ ಪರಿಸ್ಥಿತಿ ಅರ್ಥ ಮಾಡ್ಕೋ."
ನನಗೆ ಗಂಭೀರವಾದ ಪರಿಸ್ಥಿತಿಯಲ್ಲೂ ನಗು ಬಂತು... ಹತ್ತು ನಿಮಿಷದ ಮುಂಚೆ "ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೆ" ಎನ್ನುವವನು, ಈಗ "ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ ಅಸ್ಟು ನಿಧಾನವಾಗಿ ಹೋಗು" ಅಂತ ಇದಾನೆ...

ಅಂತು ಆಮೆ ವೇಗದಲ್ಲಿ ಬಳ್ಳಾರಿಯನ್ನು ಸೇರಿದೆವು.
ನನಗೆ ಅಂಗಾಲಿನ ಮೇಲೆ ಪೆಟ್ಟಾಗಿತ್ತು. ಆ ಪೆಟ್ಟನ್ನು ನನ್ನ ಪ್ಯಾಂಟ್ ಮುಚ್ಚಿಕೊಂಡಿತ್ತು.
ಆದರೆ ನಟನಿಗೆ, ಗಲ್ಲದ ಮೇಲಾಗಿರುವ ಪೆಟ್ಟನ್ನು ಹೇಗೆ ಮುಚ್ಚಿಕೊಳ್ಳುವುದು... ?.
ಪೋಷಕರು "ಬೈಕಿನಲ್ಲಿ ದೂರದ ಪ್ರಯಾಣ ಮಾಡಬೇಡಿ" ಎಂದು ಸಲಹೆ ಕೊಟ್ಟಿದ್ದರು, ನಾವು ಅವರನ್ನು ಸುಮ್ಮನಿರಿಸಿ ಬಂದಿದ್ದೇವೆ. ಈಗ ಅವರಿಗೆ ನಿಜ ಹೇಳಿದರೆ, ಮುಂದೆ ನಮ್ಮನ್ನು ಬೈಕ್ ಹತ್ತಲು ಬಿಡುವರೇ ?... ಹಾಗಾಗೆ ಒಂದು ಸುಂದರ ಸುಳ್ಳು ಹೇಳಲು ಸಿದ್ದವಾದೆವು...
ಕೇಳಿದವರಿಗೆಲ್ಲ... "ದಾರಿಯಲ್ಲಿ, ಒಂದು ಹೋಟೆಲ್ಲಿಗೆ ಹೋದೆವು. ಆ ಹೋಟೆಲ್ ಎರಡು ಮಹಡಿಯನ್ನು ಹೊಂದಿತ್ತು. ನಾವು ಮೇಲ್ಮಹಡಿಗೆ ಹೋಗಲು, ಮೆಟ್ಟಲು ಹತ್ತುತ್ತಿರುವಾಗ ನಟ ಜಾರಿ(ಸ್ಕಿಡ್ ಆಗಿ) ಬಿದ್ದ. ಅದಕ್ಕೆ ನಟನಿಗೆ ಪೆಟ್ಟಾಯ್ತು..." ಅಂತ ಹೇಳಿ ಪ್ರಕರಣವನ್ನು ಮುಚ್ಚಿಹಾಕಿದೆವು. ನಿಜ ಹೇಳಬೇಕೆಂದರೆ, ನಟನಿಗೆ ಗಾಯಗಳು ವಾಸಿಯಾಗಲು ಕೆಲವು ವಾರಗಳು ಹಿಡಿಯಿತು.

ನನಗೆ ಈ ಘಟನೆ ನೆನಪಾದಾಗಲೆಲ್ಲ ನಟ ಆಡಿದ ಮಾತುಗಳನ್ನು ನೆನೆದು ನಗ್ತಾ ಇರ್ತೀನಿ.

Thursday, October 8, 2009

ಉಪ್ಪಿಗಿಂತ ರುಚಿ ಬೇರೆ ಇಲ್ಲ


ಮೈಸೂರಿನಲ್ಲಿದ್ದಾಗ ನಾವು ದಿನಾಲೂ ರಾತ್ರಿ ಊಟಕ್ಕೆ ಒಂದು ಮೆಸ್ಸ್'ಗೆ ಹೋಗ್ತಾ ಇದ್ವಿ.
ಊಟ ಪರವಾಗಿಲ್ಲ. ಬೇರೆ ಹೋಟೆಲುಗಳಿಗೆ ಹೋಲಿಸಿದರೆ ಚನ್ನಾಗೆ ಮಾಡ್ತಾ ಇದ್ರು..
ನಾವು ದಿನಾಲೂ ತಪ್ಪಿಸದೇ ಹೋಗ್ತಾ ಇದ್ದುದರಿಂದ, ಹೋಟೆಲ್ ನಡೆಸುತ್ತಿದ್ದ ಅಂಕಲ್, ಆಂಟಿ, ಅವರ ಮಗಳು ಹಾಗು ಅವರ ಮಗ ಎಲ್ರೂ ಪರಿಚಯವಾಗಿದ್ರು.
ಊಟ ಆದ ನಂತರ ಒಂದು ಲೋಟದಲ್ಲಿ ಮಜ್ಜಿಗೆ ಕೂಡ ಕೊಡ್ತಾ ಇದ್ರು. ಮಜ್ಜಿಗೆಗೆ ಸ್ವಲ್ಪ ಉಪ್ಪು ಕಮ್ಮಿ ಹಾಕ್ತ ಇದ್ರು. ನಾನು ಮಜ್ಜಿಗೆ ಕುಡಿತ ಇರುವಾಗ, ಕಡಿಮೆ ಉಪ್ಪು ಇರುವುದು ಗಮನಿಸಿ, ಮತ್ತೊಮ್ಮೆ ಉಪ್ಪು ತರಿಸಿ ಹಾಕಿಕೊಳ್ಳುತ್ತಿದ್ದೆ. ಊಟದ ನಂತರ ಮಜ್ಜಿಗೆ ಕುಡಿಯುವಾಗ ದಿನಾಲೂ ಉಪ್ಪು ಜಾಸ್ತಿ ಹಾಕಿಸಿಕೊಂಡು ಕುಡಿತ ಇದ್ದೆ.. ಎಸ್ಟೆ ಆಗ್ಲಿ ನಾನು ಉಪ್ಪು-ಖಾರ ತಿನ್ನೋ ಹುಡುಗ ಅಲ್ವಾ :P

ಸರಿ, ಎಲ್ಲ ಪರೀಕ್ಷೆಗಳು ಮುಗಿದವು. ಮರುದಿನ ಮೈಸೂರಿಗೆ ವಿದಾಯ ಹೇಳೋ ದಿನ. ಹಾಗಾಗಿ ಆ ಮೆಸ್ಸಿನಲ್ಲಿ ಕೊನೆಯ ದಿನ ಊಟ ಮಾಡಲು ಹೋದೆವು. ಹೋಟೆಲಿನ ಆಂಟಿ, ಅಂಕಲ್'ಗೆ ಹೇಳಿದ್ವಿ. "ಇದು ನಿಮ್ಮ ಮೆಸ್ಸಿನಲ್ಲಿ ಕೊನೆ ದಿನ" ಅಂತ.
ಅವರು ಅಂದು ನಮ್ಮನ್ನು ಮನೆ ಮಕ್ಕಳಂತೆ ತುಂಬಾ ಆತ್ಮಿಯಾವಾಗಿ ಸಲುಗೆಯಿಂದ ಊಟ ಬಡಿಸಿದರು.
"ಅವಾಗವಾಗ ಮೈಸೂರಿಗೆ, ನಮ್ಮ ಮನೆಗೆ ಬರ್ತಾ ಇರಿ..." ಅಂತ ಹೇಳಿದ್ರು...
ನಾವು "ಗ್ಯಾರೆಂಟಿ" ಬರ್ತಿವಿ ಅಂತ ಆಶ್ವಾಸನೆ ಕೊಟ್ವಿ..

ಪ್ರತಿದಿನದ ಹಾಗೆ ಊಟ ಮುಗಿಯುತ್ತಿರುವಾಗ ನನ್ನ ಟೇಬಲ್ಲಿನ ಮೇಲೆ ಮಜ್ಜಿಗೆ ಲೋಟವನ್ನು ಇಟ್ಟರು. ಆಂಟಿ, ಅಂಕಲ್, ಅವರ ಮಗಳು ಹಾಗು ಅವರ ಮಗ ಎಲ್ಲರು ನನ್ನನ್ನೇ ನೋಡ್ತಾ ಇದ್ರು.. ಬಹುಶ ಇದು ಕೊನೆ ದಿನ ಅಂತ ಸ್ವಲ್ಪ ಸೆಂಟಿಮೆಂಟ್ ಆಗಿರಬಹುದು ಅನ್ಕೊಂಡು ಸುಮ್ಮನಿದ್ದೆ. ಸರಿ, ಊಟದ ನಂತರ ಮಜ್ಜಿಗೆಯನ್ನು ಕುಡಿದೆ. ಆದರೆ ಇಂದು ಉಪ್ಪು ಹಾಕಿಕೊಳ್ಳುವುದನ್ನು ಮರೆತೆ. ಇನ್ನೂ ಅವರು ನನ್ನನ್ನೇ ನೋಡುತ್ತಿದ್ದುದು ನೋಡಿ...
ತಡೆದುಕೊಳ್ಳಲಾಗದೆ ಕೊನೆಗೆ ಕೇಳೆಬಿಟ್ಟೆ... "ಯಾಕೆ ಆವಗ್ಲಿಂದ ಆ ಥರ ನೋಡ್ತಾ ಇದ್ದೀರಾ....??"
ಅವರು ನಗುತ್ತ ಕೇಳಿದರು... "ಮಜ್ಜಿಗೆ ಹೇಗಿತ್ತು.. ?"
ನಾನು.. "ಚನ್ನಾಗಿತ್ತು...."
ಅವರು.. "ಮತ್ತೆ.. ಉಪ್ಪು ಜಾಸ್ತಿ ಇರ್ಲಿಲ್ವ...?"
ನಾನು... "ಇಲ್ಲ. ಸರಿಯಾಗೆ ಇತ್ತು"
ಅವರು... "ಅಯ್ಯೋ ದೇವರೇ, ನಾವು ನಿಮ್ಮನ್ನು ಚೂಡಯಿಸಲು ಬಹಳ ಜಾಸ್ತಿ ಉಪ್ಪು ಹಾಕಿದರೂ, ನೀವು ಅದೇನು ಲೆಕ್ಕವಿಲ್ಲದಂತೆ ಕುಡಿದಿರಲ್ವಾ...?"
ನಾನು... "ಒಹ್.. ಹಾಗಾ... ನನಗೆ ಹಾಗೇನೂ ಅನ್ನಿಸಲಿಲ್ಲ... "
ಆಗ ಅವರು... "ನೀವು ಸಾಮಾನ್ಯದವರು ಅಲ್ಲ ಬಿಡಿ" ಅಂತ ನಗುತ್ತ ನುಡಿದರು...

NO BP, BE HAPPY.... :)