Wednesday, July 21, 2010

ಒಮ್ಮೊಮ್ಮೆ ಹೀಗೂ ಆಗುವುದು...!!!


Mobile And Tv Remote.jpg

ನೈಜ ಘಟನೆಯನ್ನು ಆಧಾರಿಸಿ ಈ ಲೇಖನವನ್ನು ಬರೆಯಲಾಗಿದೆ....!!!!

ಒಂದ್ಸಾರಿ ಯಾವುದೋ ವಿಷಯದ ಬಗ್ಗೆ ಮಾತಾಡೋಕೆ ಸ್ನೇಹ ತನ್ನ ಗೆಳತಿ ನಿಹಾರಿಕ ಮೊಬೈಲ್ ಗೆ ಕರೆ ಮಾಡಿದಳು. ಆದರೆ ನಿಹಾರಿಕ ಕರೆಯನ್ನು ಸ್ವೀಕರಿಸಲಿಲ್ಲ. ಪದೇ ಪದೇ ಪ್ರಯತ್ನಿಸಿದರೂ ಅವಳು ಕರೆಯನ್ನು ಸ್ವೀಕರಿಸಲಿಲ್ಲ. ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಅವಳಿಗೆ ಒಂದು ಈ-ಮೇಲ್ ಕಳುಹಿಸಿದಳು. ಸ್ವಲ್ಪ ಸಮಯದ ನಂತರ ಒಂದು ಲ್ಯಾಂಡ್ ಲೈನ್ ನಂಬರಿನಿಂದ ಸ್ನೇಹಳಿಗೆ ಕರೆ ಬಂತು. ಫೋನ್ ಎತ್ತಿ "ಹಲೋ" ಎಂದಳು.
ಆ ಕಡೆಯಿಂದ ಮಾತನಾಡಿದ ಧ್ವನಿ ನಿಹಾರಿಕಳದು ಎಂದು ತಿಳಿಯಿತು.
"ಅಲ್ವೇ ಆವಾಗಿನಿಂದ ನಿನ್ನ ಮೊಬೈಲ್ ಗೆ ಕರೆ ಮಾಡುತ್ತಿದ್ದೇನೆ... ಫೋನ್ ಯಾಕೆ ಎತ್ತಲಿಲ್ಲ.."
ನಿಹಾರಿಕ: "ಸಾರೀ ಕಣೆ.. ಮೊಬೈಲ್ ಮನೇಲಿ ಮರೆತು ಬಂದುಬಿಟ್ಟಿದ್ದೇನೆ... "
ಸ್ನೇಹ: "ಒಹ್ ಹಾಗ.. ನಾನು ಹೆದರಿಬಿಟ್ಟಿದ್ದೆ.. ಅದು ಹ್ಯಾಗೆ ಮೊಬೈಲ್ ಮನೇಲಿ ಮರೆತುಬಂದೆ...??"
ನಿಹಾರಿಕ: "ಬೆಳಿಗ್ಗೆ ಆಫೀಸಿಗೆ ಲೇಟ್ ಆಗ್ತಾ ಇತ್ತು.. ಮೊಬೈಲ್ ಅನ್ಕೊಂಡು TV Remote ನ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಕೊಂಡು ಬಂದೆ."
ನಗು ಬಂದರೂ ತಡೆದುಕೊಂಡು "ಅಲ್ವೇ TV Remote ಗು, ಮೊಬೈಲ್ ಗೆ ವ್ಯತ್ಯಾಸ ಗೊತ್ತಗೊಲ್ವ..????"
ನಿಹಾರಿಕ: "ಅವಸರದಲ್ಲಿ ಗೊತ್ತಾಗ್ಲಿಲ್ಲ ಕಣೆ........ :( "
"ಒಳ್ಳೆ ಕೆಲಸ ಮಾಡಿದಿಯ ಬಿಡು... ಹ್ಹ ಹ್ಹ ಹ್ಹ..."
ನಿಹಾರಿಕ: "ನಗಬೇಡವೆ............... ಇನ್ನೊಂದು ವಿಷಯ....."
"ಏನು...?"
ನಿಹಾರಿಕ: "For your kind information, ಇದು ಮೊದಲನೇ ಬಾರಿಗೆ ಅಲ್ಲ ಈ ತರಹ ಆಗ್ತಾ ಇರೋದು.. ಇದೇ ತರ ಬಹಳ ಸಾರಿ ಆಗಿದೆ...ಹ್ಹ ಹ್ಹ ಹ್ಹ... "
"ಅಯ್ಯೋ ನಿನ್ನ......"
ನಿಹಾರಿಕ: "ಒಂದ್ಸಾರಿ ಏನಾಯ್ತು ಗೊತ್ತ...??"
"ಏನಾಯ್ತು...?"
ನಿಹಾರಿಕ: "ಒಂದ್ಸಾರಿ.. ಮೊಬೈಲ್ ಮತ್ತೆ TV Remote ಎರಡನ್ನು ವ್ಯಾನಿಟಿ ಬಾಗ್ನಲ್ಲಿ ನನಗೆ ಗೊತ್ತಾಗದೆ ಹಾಕಿಕೊಂಡು ಬಿಟ್ಟಿದ್ದೆ.. BMTC ಬಸ್ನಲ್ಲಿ ಹೋಗೋವಾಗ, ಫೋನ್ ಬಂತು... ಸಡನ್ ಆಗಿ ವ್ಯಾನಿಟಿ ಬ್ಯಾಗ್ನಿಂದ ಮೊಬೈಲ್ ತಗೆದುಕೊಳ್ಳುವುದರ ಬದಲು TV Remote ತೆಗೆದುಬಿಟ್ಟೆ. ಅಲ್ಲೇ ನಿಂತಿದ್ದ ಕಂಡಕ್ಟರ್ ಅವಕ್ಕಾಗಿ ನೋಡ್ತಾ ಇದ್ದ... ಹ್ಹ ಹ್ಹ ಹ್ಹ"


Share/Save/Bookmark

Wednesday, July 14, 2010

ಯಾಕೋ.... ನನ್ ಟೈಮ್ ಸರಿಯಿಲ್ಲ....!!??


ನಾನು ಎದ್ದಾಗ ನನ್ನ ಮೊಬೈಲಿನಲ್ಲಿ ಸಮಯ ಬೆಳಿಗ್ಗೆ 8 AM ಆಗಿತ್ತು. ಆಫೀಸ್ ಇರೋದು 9 AM ಗೆ. ಮನೆಯಿಂದ ಆಫೀಸ್ ಗೆ ಹತ್ತು ಕಿಲೋಮೀಟರು. ಲೇಟ್ ಆಗಿ ಎದ್ದ ಪರಿಣಾಮವಾಗಿ ಬೇಗ ಬೇಗ ಸ್ನಾನ ಮಾಡಿ, ಬೆಳಿಗ್ಗಿನ ಉಪಹಾರವನ್ನು ಕೂಡ ಸೇವಿಸದೆ ಆತುರಾತುರವಾಗಿ ಬೈಕ್ ಹತ್ತಿ ಆಫೀಸಿನ ಕಡೆ ಹೊರಟೆ.

ನಾನು ದಿನಾಲು ಕಬ್ಬನ್ ಪಾರ್ಕ್ ಒಳಗಡೆ ಇರುವ ದಾರಿಯಿಂದ UB City ಕಡೆಗೆ ಹೋಗುವ ರಸ್ತೆಗೆ ಹೋಗೋದು. ನಾನು ಅಲ್ಲಿಗೆ ಬಂದಾಗ ಕಬ್ಬನ್ ಪಾರ್ಕ್ ನ ಗೇಟ್ ಮುಚ್ಚಿತ್ತು. ಕೆಲವು ವಾಹನಗಳು ಆ ಗೇಟಿನ ಮುಂದೆ ನಿಂತಿದ್ದವು. ಗೇಟ್ ಮುಂದೆ ಕಾವಲಿದ್ದ ವ್ಯಕ್ತಿಯನ್ನು ಕೇಳಿದೆ "ಯಾಕೆ ಗೇಟ್ ತೆಗೆದಿಲ್ಲ...??". ಅದಕ್ಕೆ ಆ ವ್ಯಕ್ತಿ "ಎಂಟು ಗಂಟೆಯವರೆಗೂ ತೆಗೆಯೋಲ್ಲ" ಎಂದ.

ನನಗೆ ಆಶ್ಚರ್ಯವಾಯಿತು. ನನ್ನ ಮೊಬೈಲಿನಲ್ಲಿ ಒಂಬತ್ತು ಗಂಟೆಯಾಗಿದೆ. ಇವನು ಇನ್ನೂ ಎಂಟು ಗಂಟೆಯವರೆಗೂ ತೆಗೆಯೋಲ್ಲ ಎನ್ನುತ್ತಿದ್ದನಲ್ಲ...
ಪಕ್ಕದಲ್ಲಿದ್ದ ಒಬ್ಬ ವ್ಯಕ್ತಿಯನ್ನು "ಈಗ ಟೈಮ್ ಎಸ್ಟಾಗಿದೆ..?" ಎಂದು ಕೇಳಿದೆ.
ಅದಕ್ಕೆ ಆ ವ್ಯಕ್ತಿ "7:45" ಎಂದ.
ನನಗೆ ಒಮ್ಮೆಲೇ ಸಿಟ್ಟು ಬಂತು. ನನ್ನ ರೂಮ್'ಮೇಟ್ಸ್ ನನ್ನ ಚೂಡಯಿಸಲೆಂದು ನನ್ನ ಮೊಬೈಲ್ ನ ಸಮಯವನ್ನು ಬದಲಾಯಿಸಿದ್ದರೆಂದು ತಿಳಿದು ಸಿಟ್ಟಿನಲ್ಲಿ ಬೈಯಲು ಅವರಿಗೆ ಫೋನ್ ಮಾಡಿದೆ. ಮೊದಲು ನನ್ನಿಂದ ಇದೇ ರೀತಿಯ ತೊಂದರೆ ಅನುಭವಿಸಿದ್ದ ನಟನಿಗೆ (ನಟರಾಜ್) ಕರೆಮಾಡಿದೆ.
"ಲೋ, ನನ್ ಮೊಬೈಲ್ ಟೈಮ್ ಯಾಕೋ ಚೇಂಜ್ ಮಾಡಿದೆ...?"
ನಟ "ನಾನು ಚೇಂಜ್ ಮಾಡಿಲ್ಲ." ಎಂದ.
ಅವನು ಹಾಗೇನಾದರೂ ಚೇಂಜ್ ಮಾಡಿದ್ದರೆ ಒಪ್ಪಿಕೊಳ್ಳುತ್ತಿದ್ದ. ನಡೆದಿರುವುದನ್ನು ಅವನಿಗೆ ವಿವರಿಸಿದೆ.
ಹೀಗೆ ಎಲ್ಲ ರೂಮ್'ಮೇಟ್ಸ್ ಗೆ ಕರೆಮಾಡಿ ವಿಚಾರಿಸಿದೆ. ಅವರು ಕೂಡ ಬದಲಾಯಿಸಿಲ್ಲ ಎಂದರು.
ಹೋಗ್ಲಿ ಬಿಡು ಇವತ್ತು ನನ್ನ ಟೈಮ್ ಸರಿಯಿಲ್ಲ ಅನ್ಕೊಂಡು ಆಫೀಸ್ ಗೆ ಹೋದೆ.

ಮಧ್ಯಾನ ಸುಮಾರು ಹನ್ನೆರೆಡು ಗಂಟೆಗೆ, ಮೊಬೈಲ್'ನಲ್ಲಿ ತಪ್ಪಾಗಿ ತೋರಿಸುತ್ತಿದ್ದ ಸಮಯವನ್ನು ಸರಿಪಡಿಸಲು ಮೊಬೈಲ್ ಹೊರತೆಗೆದೆ. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಈಗ ಸಮಯ ಸರಿಯಾಗಿಯೇ ತೋರಿಸುತ್ತಿದೆ. ನಾನು ಸರಿಪಡಿಸಿಯೇ ಇರಲಿಲ್ಲ. ಆಫೀಸ್ ನಲ್ಲಿ ಕೂಡ ನನ್ನ ಮೊಬೈಲ್ ಯಾರು ಮುಟ್ಟಿರಲಿಲ್ಲ. ಇದು ಹೇಗೆ ಸಾಧ್ಯ.??. ಮತ್ತೆ ತಲೆ ಬಿಸಿಯಾಯಿತು. ಯಾಕೆ ನನಗೆ ಹೀಗೆಲ್ಲ ಆಗ್ತಾ ಇದೆ. ಇದ್ಯಾವುದೋ ಭೂತ ಕಾಟವೇ ಇರಬೇಕು...!!!!.

ಮುಂಚೆ ಇಂತಹ ತೊಂದರೆ ಯಾರಿಗಾದರು ಆಗಿದಿಯೇ ಎಂದು ಗೂಗಲ್ ನಲ್ಲಿ ಪರಿಶೋಧಿಸಿದೆ. ನನಗೆ ಹೊಸದಾದ ಸಂಗತಿಯೊಂದು ತಿಳಿದುಬಂತು. ಇಂತಹ ಸಮಸ್ಸೆಯನ್ನು ಕೆಲವರು ಅನುಭವಿಸಿದ್ದರು. ಇಂತಹ ಸಮಸ್ಸೆಗೆ ಒಂದು ಮಾರ್ಗವನ್ನು ಕೂಡ ಸೂಚಿಸಿದ್ದರು. ಅದೇನೆಂದರೆ ನಮ್ಮ ಮೊಬೈಲ್ನಲ್ಲಿ ಇರುವ "Automatic Time Update" ಎನ್ನುವ ಸೆಟ್ಟಿಂಗ್ "DeActivate" ಮಾಡುವಂತೆ ತಿಳಿಸಿದ್ದರು. "Automatic Time Update" ಸೆಟ್ಟಿಂಗ್ "Activate" ಇದ್ದಾಗ ನಮ್ಮ ಮೊಬೈಲ್ ಸಮಯವು ಹತ್ತಿರವಿರುವ "ಟೈಮ್ ಸರ್ವರ್" ಕಡೆಯಿಂದ Update ಆಗಿರುತ್ತೆ. ಕೆಲವೊಮ್ಮೆ ತಾಂತ್ರಿಕ ದೋಷವಿರುವ "ಟೈಮ್ ಸರ್ವರ್"ನಿಂದಾಗಿ ನಮ್ಮ ಮೊಬೈಲ್ನಲ್ಲಿ ಸಮಯ ತಪ್ಪಾಗಿ "Update" ಆಗಿಬಿಡುತ್ತದೆ.

ಇವೆಲ್ಲದರ ನಡುವೆ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಒಂದೇ... ಹೀಗೂ ಉಂಟೇ...!!!!
Share/Save/Bookmark

Tuesday, July 6, 2010

ಯಾವುದು ಅದೃಷ್ಟ ???

ನನ್ನ Lab exam ಮುಗಿಸಿ ಹೊರಬಂದು, ನಮ್ಮ ದಿನನಿತ್ಯದ ಹರಟೆ ಕಟ್ಟೆಯಾಗಿದ್ದ ಟೀ ಸ್ಟಾಲ್ ಮುಂದಿರುವ ಕಟ್ಟೆಯ ಮೇಲೆ, ಇನ್ನೂ Lab Exam ಬರೆಯುತ್ತಿದ್ದ ಸ್ನೇಹಿತರು ಹೊರಬರುವುದನ್ನು ಕಾಯುತ್ತ ಕೂತೆ.
ಇಂತಹ Lab Exam ಗಳಲ್ಲಿ ಕೆಲವರು ಅದೃಷ್ಟವಂತರು ಹಾಗೆ ಕೆಲವರು ದುರದೃಷ್ಟವಂತರು. ಯಾಕೆಂದರೆ ಕೆಲವರಿಗೆ Exam ನಲ್ಲಿ ಸುಲಭದ ಪ್ರೊಗ್ರಮ್ಸ್ ಬಂದರೆ, ಕೆಲವರಿಗೆ ಕಷ್ಟದ ಪ್ರೊಗ್ರಮ್ಸ್ ಬರಬಹುದು.

ಒಂದೊಂದು ಪ್ರೊಗ್ರಾಮ್ ಗೆ ಒಂದೊಂದು ನಂಬರ್ ಹಾಕಿಟ್ಟುಕೊಂಡಿರುತ್ತಾರೆ. ನಮ್ಮ ಪರೀಕ್ಷೆಗೆ ಎಷ್ಟು ಪ್ರೊಗ್ರಮ್ಸ್ ಇರುತ್ತಾವೆಯೋ ಅಸ್ಟು ಚೀಟಿಗಳನ್ನು ಮಾಡಿ, ಒಂದೊಂದು ಚೀಟಿಯಲ್ಲಿ ಒಂದೊಂದು ನಂಬರ್ ಬರೆದು, ಅವುಗಳನ್ನು ಮಡಚಿ ಇಟ್ಟಿರುತ್ತಾರೆ. ನಾವು ಆ ಎಲ್ಲ ಚೀಟಿಗಳನ್ನು ಒಮ್ಮೆ shuffle ಮಾಡಿ, ಅದರಲ್ಲಿ ಒಂದು ಚೀಟಿಯನ್ನು ಎತ್ತಿಕೊಂಡು, ಅದರಲ್ಲಿ ಬರೆದಿರುವ ನಂಬರ್ ಹೇಳಬೇಕು. ಆ ನಂಬರ್ ಮೇಲೆ ಯಾವ ಪ್ರೊಗ್ರಾಮ್ ಬಂದಿರುತ್ತೋ, ಆ ಪ್ರೊಗ್ರಾಮ್ ಮಾಡಲು ಹೇಳುತ್ತಾರೆ. ಸಾಮಾನ್ಯವಾಗಿ ಚಿಕ್ಕ ನಂಬರ್ ಬಂದಿದ್ದರೆ ಸುಲಭದ ಪ್ರೊಗ್ರಾಮ್, ದೊಡ್ಡ ನಂಬರ್ ಬಂದಿದ್ದರೆ ಕಷ್ಟದ ಪ್ರೊಗ್ರಾಮ್ ಬಂದಿರುತ್ತೆ. ಅಂದು ನನ್ನ ಅದೃಷ್ಟ ಚನ್ನಾಗಿತ್ತು ಅನ್ಸುತ್ತೆ, ನಾನು ಆರಿಸಿ ಎತ್ತಿದ ಚೀಟಿಯಲ್ಲಿ ಚಿಕ್ಕ ನಂಬರ್ ಬಂದಿತ್ತು. ಹಾಗಾಗಿ ಸುಲಭದ ಪ್ರೊಗ್ರಾಮ್ ಬಂದಕಾರಣ ಬೇಗನೆ ಪರೀಕ್ಷೆಯನ್ನು ಮುಗಿಸಿಕೊಂಡು ಹೊರಬಂದಿದ್ದೆ.

ಹೀಗೆ ಟೀ ಸ್ಟಾಲ್ ಮುಂದಿರುವ ಕಟ್ಟೆಯ ಮೇಲೆ ಸ್ನೇಹಿತರಿಗಾಗಿ ಕಾಯುತ್ತ ಕೂತಿದ್ದಾಗ ಪರೀಕ್ಷೆ ಮುಗಿಸಿಕೊಂಡು ತರುಣ್ ಬಂದ.
ಅವನು ಬಂದೊಡನೆ ನಾನು ಟೀ ಶಾಪ್ ನವನಿಗೆ "೨ ಟೀ" ಎಂದು ಕೂಗಿ ಹೇಳಿದೆ. ಟೀ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ನಮಗೆ ಟೀ ತಂದುಕೊಟ್ಟ.
ಟೀ ಕುಡಿಯುತ್ತ, ತರುಣ್ ಗೆ ಕೇಳಿದೆ... "Exam ಹೇಗಾಯ್ತೋ... ?, ಯಾವ್ ನಂಬರ್ ಬಂದಿತ್ತು...?"
ತರುಣ್ : "Exam ಚನ್ನಾಗಯ್ತು. ೧೫ ನೇ ನಂಬರ್ ಬಂದಿತ್ತು.."
"ಲೋ, ೧೫ ನೇ ನಂಬರ್ ಪ್ರೊಗ್ರಾಮ್ ತುಂಬಾ ಕಷ್ಟ ಅಲ್ವಾ... ಹ್ಯಾಗೋ ಮಾಡಿದೆ..."
ತರುಣ್ : " ನನಗೆ ಬಂದಿದ್ದು ೧೫ ನೇದು, ಆದರೆ ನಾನು ಮಾಡಿದ್ದು ೪ ನೇದು..."
ನಾನು "ಅದು ಹ್ಯಾಗೋ....?"
ತರುಣ್ ವಿವರಿಸುತ್ತ ಹೋದ...
"ನಾನು ಚೀಟಿ ಎತ್ತಿದಾಗ ಅದರಲ್ಲಿ ೧೫ ಎಂದಿತ್ತು.
೧೫ ನೇ ಪ್ರೊಗ್ರಾಮ್ ಕಷ್ಟ ಅಂತ ಗೊತ್ತಿತ್ತು ಅಲ್ವಾ....
ಅದಕ್ಕೆ ನಾನು ೪ ಎಂದು ಸುಳ್ಳು ಹೇಳಿ, ಚೀಟಿಯನ್ನು ಮಡಚಿ, ಚೀಟಿಗಳಲ್ಲಿ ಹಾಕಿಬಿಟ್ಟೆ.. ಹಾಗಾಗಿ ಅವರು ೪ ನೇ ನಂಬರಿನ ಪ್ರೊಗ್ರಾಮ್ ಮಾಡೋಕೆ ಹೇಳಿದ್ರು."

ಕೆಲವೊಮ್ಮೆ ಕಷ್ಟ ಬಂದಾಗ ಹೆದರಿಕೊಳ್ಳದೆ ಈ ರೀತಿಯ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳಬೇಕಾಗುತ್ತದೆ !!!! ಹ್ಹ ಹ್ಹ ಹ್ಹ...
Share/Save/Bookmark

Tuesday, June 29, 2010

ಹೊಗೆನಿಕಲ್ ಜಲಪಾತ

ಮೊನ್ನೆ ಶನಿವಾರ ಹೊಗೆನಿಕಲ್ ಜಲಪಾತ ನೋಡಲು ನಾವು ಸ್ನೇಹಿತರೆಲ್ಲ ಸೇರಿ ಹೋಗಿದ್ದೆವು. ಈ ಪ್ರವಾಸದ ಬಗ್ಗೆ ಹೆಚ್ಚಾಗಿ ಬರೆಯದೆ ಸುಮ್ಮನೆ ಅಲ್ಲಿ ನಾವು ತೆಗೆದ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ.








ಪ್ರವಾಸದ ದಿನಾಂಕ: ೨೬ ಜೂನ್ ೨೦೧೦ ಶನಿವಾರ.
ನಾವು ಹೋಗಿಬಂದ ಮಾರ್ಗ: ಬೆಂಗಳೂರು -> ಹೊಸೂರು -> ಹೊಗೆನಿಕಲ್. ಇಲ್ಲಿಗೆ ಕೊಳ್ಳೇಗಾಲದ ಮುಖಾಂತರವು ಹೋಗಿಬರಬಹುದು.
ನದಿಯ ಹೆಸರು: ಕಾವೇರಿ. (ನದಿಯ ಒಂದು ಕಡೆ ಕರ್ನಾಟಕ. ಇನ್ನೊಂದು ಕಡೆ ತಮಿಳುನಾಡು ಇದೆ.)
ದೂರ: ೧೮೦ ಕಿಲೋಮೀಟರು.
ವಾಹನ: ಕ್ವಾಲಿಸ್.
ನಮ್ಮ ಟೀಮ್: ನಾನು (ಶಿವಪ್ರಕಾಶ್), ರಘು, ಮಂಜು, ರಾಮು, ನಿಶಾ, ಸುಷ್ಮಾ.
ಸ್ಥಳದ ಮಾಹಿತಿ: http://en.wikipedia.org/wiki/Hogenakkal_Falls ಗೆ ಭೇಟಿ ಕೊಡಿ.

ಈ ಪ್ರವಾಸ ತುಂಬಾ ಚನ್ನಾಗಿತ್ತು. ನೀರಿನಲ್ಲಿ ಈಜಾಡಿದ್ದು, ತೆಪ್ಪದಲ್ಲಿ ಹೋಗಿದ್ದು. ಇನ್ನೊಂದು ತೆಪ್ಪದಲ್ಲಿ ಬಂದ ಮೊವಿಂಗ್ ರೆಸ್ಟೋರೆಂಟ್ ನಲ್ಲಿ ಖರೀದಿ ಮಾಡಿದ್ದು (ಮೇಲಿನ ಚಿತ್ರ ನೋಡಿ). ಸತ್ತು ಬಿದ್ದಿದ್ದ ಮೀನುಗಳಿಂದ ಬಂದ ವಾಸನೆಯಿಂದ ಮೂಗು ಮುಚ್ಚಿಕೊಂಡಿದ್ದು. ಎಲ್ಲರೂ ಸೇರಿ ಹರಟೆ ಹೊಡೆದಿದ್ದು. ನಮ್ಮ ನಮ್ಮ ಸಂತೋಷದ ಹಾಗು ಉಲ್ಲಾಸದ ನೆನಪುಗಳನ್ನು ನೆನಪಿಸಿಕೊಂಡಿದ್ದು. ಒಬ್ಬರನ್ನೊಬ್ಬರು ಚೂಡಯಿಸಿದ್ದು. ರಸ್ತೆ ಮಧ್ಯದಲ್ಲಿ ಕುಳಿತು ಫೋಟೋ ತೆಗಿಸಿಕೊಂಡಿದ್ದು. ಒಟ್ಟಿನಲ್ಲಿ ಇದು ನನ್ನ ನೆನಪಿನ ಪುಟಗಳಲ್ಲಿ ಒಂದು ಮರೆಯಲಾರದ ದಿನ.
Share/Save/Bookmark

Tuesday, June 15, 2010

ಬಾಗಲಕೋಟೆ ಪ್ರವಾಸ

ನಾವೆಲ್ಲರೂ ಸೇರಿ ಇತ್ತೀಚಿಗೆ ಸ್ನೇಹಿತರ ಮದುವೆಗಳ ಪ್ರಯುಕ್ತ ಬಾಗಲಕೋಟೆಗೆ ಹೋಗಿದ್ದೆವು. ಹಾಗೆ ಹತ್ತಿರವಿರುವ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಬನಶಂಕರಿ, ಮಹಾಕೂಟ, ಪಟ್ಟದಕಲ್ಲು, ಐಹೊಳೆಗೆ ಸಹ ಹೋಗಿಬಂದೆವು. ನಿಜಕ್ಕೂ ಎಂತಹ ಅದ್ಭುತ ಸ್ಥಳಗಳು. ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕು.

ಬಾದಾಮಿ:
ವಾತಾಪಿ (ಇಂದಿನ ಬಾದಾಮಿ) ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯ ವಂಶವು ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. ವಾಸ್ತುಶಿಲ್ಪ ಮತ್ತು ಕಲೆಗೆ ಚಾಲುಕ್ಯ ಸಾಮ್ರಾಜ್ಯದ ಕೊಡುಗೆ ಅಪಾರ.



ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು. ಗುಡ್ಡದ ಕಲ್ಲು ಬಾದಾಮಿ ಪದಾರ್ಥದ ಬಣ್ಣವನ್ನು ಹೋಲುವುದರಿಂದ ಈ ಸ್ಥಳಕ್ಕೆ ಬಾದಾಮಿ ಎಂದು ಹೆಸರು ಬಂತು ಎಂದು ಕೆಲವು ಮೂಲಗಳ ಪ್ರಕಾರ ಹೇಳಲಾಗಿದೆ. ಚಾಲುಕ್ಯರು ಮೂಲತ ವೈಷ್ಣವರು, ನಂತರ ಅವರು ಶೈವಧರ್ಮಕ್ಕೆ ಮತಾಂತರಗೊಂಡರು.


ಹರಿಹರರ ಚಿತ್ರದ ಹಾಗೆ ಪಕ್ಕದಲ್ಲಿನ ಈ ಚಿತ್ರದಲ್ಲಿ ಅವರ ಆನೆ-ನಂದಿ ವಾಹನಗಳನ್ನು ಕೂಡ ಹೊಂದಿಸಿ ಈ ಚಿತ್ರವನ್ನು ಕೆತ್ತಿದ್ದಾರೆ. ವಿಷ್ಣುವಿನ ವಾಹನ ಗರುಡ ಪಕ್ಷಿ, ಆದರೆ ಅದಕ್ಕೂ ಮುಂಚೆ ವಿಷ್ಣುವಿನ ವಾಹನ ಆನೆಯಾಗಿತ್ತಂತೆ.


ಈ ಚಿತ್ರದಲ್ಲಿ ಶಿವನ ವಾಹನವಾದ ನಂದಿಯ ಮೇಲೆ ಶಿವಪಾರ್ವತಿ ಕುಳಿತುಕೊಂಡಿದ್ದಾರೆ. ಪಾರ್ವತಿ ಈ ಚಿತ್ರದಲ್ಲಿ ಇಂದಿನ ಕಾಲದ ಹುಡುಗೀರು ತಮ್ಮ ಬಾಯ್ ಫ್ರೆಂಡ್ ಗಾಡಿ ಓಡಿಸುವಾಗ ಹಿಂದೆ ಕುಳಿತುಕೊಳ್ಳುವ ಶೈಲಿಯಲ್ಲಿ ಕುಳಿತುಕೊಂಡಿರುವುದು ವಿಶೇಷ.

ಪಟ್ಟದಕಲ್ಲು:


ಐಹೊಳೆ:

ನಮ್ಮ ದೇಶದ ಲೋಕಸಭೆಯ ಕಟ್ಟಡವು ಐಹೊಳೆಯಲ್ಲಿನ ಈ ದುರ್ಗಾ ದೇವಾಲಯವನ್ನು ಹೋಲುತ್ತದೆ.


ಚಾಲುಕ್ಯರ ಲಾಂಛನ. ಈ ಲಾಂಛನದಲ್ಲಿ ವರಾಹವನ್ನು ಕಾಣಬಹುದು. ವರಾಹ ಅವತಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದೆನಿಸಿದೆ. ಅವರ ನಾಣ್ಯದಲ್ಲಿ ವರಾಹ ಇದ್ದುದರಿಂದ, ಅವರು ನಾಣ್ಯವನ್ನು ವರಾಹ ಎನ್ನುತ್ತಿದ್ದರು. ನೀವು ಕೂಡ ಕೇಳಿರಬಹುದು. ಉದಾಹರಣೆಗೆ: ರಾಜನು ನೂರು ವರಹಗಳನ್ನು ಕಾಣಿಕೆಯಾಗಿ ಕೊಟ್ಟನು.

ಹೆಚ್ಚಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ
ಚಾಲುಕ್ಯ Chalukya dynasty ಬಾದಾಮಿ ಪಟ್ಟದಕಲ್ಲು ಐಹೊಳೆ
Share/Save/Bookmark

Monday, June 7, 2010

ಬಾ ಮಳೆಯೇ ಬಾ

ಬಿ.ಆರ್. ಲಕ್ಷ್ಮಣರಾವ್ ಅವರು ಬರೆದ "ಬಾ ಮಳೆಯೇ ಬಾ" ನಮ್ಮೆಲ್ಲರಿಗೂ ತುಂಬಾ ಇಷ್ಟವಾದ ಹಾಡು. ಸೋನುನಿಗಮ್ ಕೂಡ ಆ ಹಾಡನ್ನು ತುಂಬ ಸೊಗಸಾಗಿ ಹಾಡಿ, ನಮ್ಮ ಮನದಲ್ಲೇ ಉಳಿಯುವಂತೆ ಮಾಡಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳು.

ಅದೇನೋ ಗೊತ್ತಿಲ್ಲ. ಕೆಲವು ಹಾಡುಗಳು, ನನಗೆ ಬರುವ ಸನ್ನಿವೇಶಕ್ಕೆ ತಕ್ಕಂತೆ ನನ್ನ ಬಾಯಲ್ಲಿ ಬದಲಾಗುತ್ತಿರುತ್ತವೆ. ಹಾಗೆ ಈ ಹಾಡಿನ ಕೆಲವು ಸಾಲುಗಳು ಆಫೀಸ್-ಮನೆ ನಡುವೆ ನನ್ನ ಬಾಯಲ್ಲಿ ಬದಲಾದ ಬಗೆ ನೋಡಿ.

Manager: ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನಮ್ಮ Employees ಆಫೀಸಿಗೆ ಬರಲಾರದಂತೆ
ಅವರಿಲ್ಲಿ ಬಂದೊಡನೇ, ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, ಹಿಂತಿರುಗಿ ಹೋಗದಂತೆ, ಬಿಡದೇ ಬಿರುಸಾಗಿ ಸುರಿ

Employee: ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನಾನು ಆಫೀಸಿನಿಂದ ಮನೆಗೆ ಬರಲಾರದಂತೆ
ನಾ ಮನೆಗೆ ಬಂದೊಡನೇ, ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, (ನಾಳೆ ಆಫೀಸಿಗೆ) ಹಿಂತಿರುಗಿ ಹೋಗದಂತೆ, ಬಿಡದೇ ಬಿರುಸಾಗಿ ಸುರಿ

Employee ಹೆಂಡ್ತಿ: ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಕಾದಿಹೆನು ಮನೆಯಲ್ಲಿ, ಅವರಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು, ಮತ್ತೆ ನಾಳೆಯಾಗದಂತೆ.

ಇದಕ್ಕೆ ನಿಮ್ಮ ಕ್ಷಮೆಯಿರಲಿ....

ಇಂತಿ ನಿಮ್ಮ ಪ್ರೀತಿಯ
ಶಿವಪ್ರಕಾಶ್.

Share/Save/Bookmark

Thursday, March 11, 2010

ಹೀಗೆ ಸುಮ್ಮನೆ

ಹೀಗೆ ಸುಮ್ಮನೆ.... ನಾನು ಮದುವೆಯಾಗುವ ಹುಡುಗಿ, ಯಾವ ಕೆಲಸದಲ್ಲಿದ್ದರೆ ಹೇಗೆ ವರ್ತಿಸಬಹುದು ಎಂದು ಆಲೋಚಿಸುತ್ತಿರುವಾಗ ಹೊಳೆದ ಕೆಲವು ಸಾಲುಗಳು....

ಒಂದು ವೇಳೆ ಹುಡುಗಿ Software Tester ಆಗಿದ್ರೆ ಹೇಗೆ...?
ಬೇಡ ಬಿಡಿ,
ನಾನು ಏನೇ ಕೆಲಸ ಮಾಡಿದ್ರು Bugs ಕಂಡುಹಿಡಿಯುವಳೇನೋ....

ಹುಡುಗಿ HR ಆಗಿದ್ರೆ ಹೇಗೆ...?
ಬೇಡ ಬಿಡಿ,
ಮಾತು ಮಾತಿಗೂ Mail (ಮಿಂಚಂಚೆ) ಕಳಿಸು ಎನ್ನಬಹುದೇನೋ...?

ಹುಡುಗಿ Accountant ಆಗಿದ್ರೆ ಹೇಗೆ...?
ಬೇಡ ಬಿಡಿ,
ಪ್ರತಿಯೊಂದಕ್ಕೂ ಲೆಕ್ಕ ಕೇಳಿದ್ರೆ ಕಷ್ಟ ಆಗುತ್ತೆ...

ಹುಡುಗಿ ಲೇಖಕಿ ಆಗಿದ್ರೆ ಹೇಗೆ ...?
ಬೇಡ ಬಿಡಿ,
ಮನೆಯಲ್ಲಿ ನಡೆಯೋ ಪ್ರತಿಯೊಂದು ವಿಷಯದ ಬಗ್ಗೆ ಪುಸ್ತಕ ಬರೆದರೆ ಕಷ್ಟ.

ಹುಡುಗಿ ಡಾಕ್ಟರ್ ಆಗಿದ್ರೆ ಹೇಗೆ ...?
ಬೇಡ ಬಿಡಿ,
ಸಣ್ಣ ಪುಟ್ಟ ಜ್ವರಕ್ಕು, ಇಂಜೆಕ್ಷನ್ ಹಾಕಿದ್ರೆ ಕಷ್ಟ.

ಹುಡುಗಿ ಲಾಯರ್ ಆಗಿದ್ರೆ ಹೇಗೆ ...?
ಬೇಡ ಬಿಡಿ,
ನಾನು ಅಪ್ಪಿ ತಪ್ಪಿ ಏನಾದ್ರು ತಪ್ಪು ಮಾಡಿದಾಗ, ಕೋರ್ಟ್ ನಲ್ಲಿ ಕೇಸ್ ಹಾಕಿದ್ರೆ ಕಷ್ಟ...

ಇಷ್ಟು ಸಾಕು ಅನ್ಸುತ್ತೆ.... ಮುಂದೆ ನೀವೇ ಬರೆದುಕೊಳ್ಳಿ.....
Share/Save/Bookmark