
ಮೂರು ವರ್ಷಗಳ ಹಿಂದೆ ನಡೆದ ಘಟನೆ.
ನಾನು ಹಾಗು ನಟ ಇಬ್ಬರು ಸೇರಿ ಬೆಂಗಳೂರಿನಿಂದ ಬಳ್ಳಾರಿಗೆ ಹೋಗಬೇಕಾಗಿತ್ತು. ಬಳ್ಳಾರಿ ಹತ್ತಿರ ಇರುವ 'ಕುಡತಿನಿ' ನನ್ನ ಊರು. ಆದರೆ ನಾವು ಹೋಗುತ್ತಿದ್ದುದು ಬೇರೆ ಕೆಲಸದ ನಿಮಿತ್ತ. ಅಲ್ಲಿ ಸ್ವಲ್ಪ ಸುತ್ತುವ ಕೆಲಸಗಳಿದ್ದರಿಂದ, ತಿರುಗಾಡಲು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋದರೆ ಒಳಿತು ಎಂದು ನಿರ್ಧರಿಸಿದೆವು. ೩೦೦ ಕಿಲೋಮೀಟರುಗಳ ಪ್ರಯಾಣವನ್ನು ಬೈಕಿನಲ್ಲೇ ಮಾಡಲು ಸಜ್ಜಾದೆವು. ಜೀವನದಲ್ಲಿ ಮೊದಲಬಾರಿಗೆ, ಬೈಕಿನಲ್ಲಿ ಇಷ್ಟು ದೂರದ ಪ್ರಯಾಣ ಮಾಡ್ತಾ ಇರೋದು. ಬೆಂಗಳೂರನ್ನು ಬೆಳಗಿನಜಾವ ಬಿಡುವ ಯೋಚನೆ ಮಾಡಿದ್ರು. ಕೆಲವು ಸಣ್ಣ ಪುಟ್ಟ ಕೆಲಸಗಳು ಇದ್ದುದರಿಂದ, ನಾವು ಬಿಡುವುದು ತಡವಾಯಿತು. ನಾವು ಬೆಂಗಳೂರು ಬಿಟ್ಟಾಗ ಮಧ್ಯಾನ ೪ ಗಂಟೆ. ಬೆಂಗಳೂರು ದಾಟುವುದರೊಳಗೆ ಒಂದು ಗಂಟೆ ಜಾರಿ ಹೋಯಿತು. ನಾವು ತುಮಕೂರು ಸೇರಿದಾಗ ಸಮಯ ಸಂಜೆ ೬ ಗಂಟೆ.
ಆಗಸದ ಸೂರ್ಯನಿಗೆ ಅವತ್ತು ಏನು ಕೆಲಸವಿತ್ತೇನೋ..?..
ಸ್ವಲ್ಪ ಬೇಗಾನೆ ಮರೆಯಾಗಲು ಶುರು ಮಾಡಿದ...
ಸರಿ, ತುಮಕೂರಿನಲ್ಲಿ ಒಂದು ಕಪ್ ಟೀ ಕುಡಿದು, ಸ್ವಲ್ಪ ವಿಶ್ರಾಂತಿ ಪಡೆದು ಮುಂದುವರೆದೆವು.
ಸೂರ್ಯ ಮರೆಯದಂತೆ, ಕತ್ತಲು ಕವಿಯಾಲರಂಬಿಸಿತು. ಬೈಕಿನ ಹೆಡ್ ಲೈಟ್ ಹೊತ್ತಿಸಿದೆವು. ಅದೇನು ತೊಂದರೆಯಾಗಿತ್ತೋ ಏನೋ ಹೆಡ್ ಲೈಟ್ ನಿಂದ ಬೆಳಕು ತುಂಬಾ ಕಡಿಮೆ ಬರುತ್ತಿತ್ತು..ಅದನ್ನು ಹಾಕುವುದು ಒಂದೇ. ಹಾಕದಿರುವುದು ಒಂದೇ. ಮುಂಚೆ ಎಲ್ಲ ಸರಿಯಾಗಿತ್ತು. ಇದ್ದಕ್ಕಿದ್ದ ಹಾಗೆ ಈ ಹೆಡ್ ಲೈಟ್ ಕೈಕೊಟ್ಟಿದೆ. ಕತ್ತಲದಂತೆ ಮುಂದೆ ಏನು ಕಾಣಿಸದಾಯ್ತು. ಹಾಗೆ ನಿಧಾನವಾಗಿ ರಸ್ತೆಯಲ್ಲಿ ಬಿಡಿಸಿದ ಬಿಳಿಪಟ್ಟಿಯ ಮೇಲೆ ನಾನೊಂದು ೫೦ ಕಿಲೋಮೀಟರು ನಡೆಸೋದು, ಅವನೊಂದು ೫೦ ಕಿಲೋಮೀಟರು ನಡೆಸೋದು.. ಹೀಗೆ "ಸಾಗುತ ದೂರ ದೂರ......, ಬಾ ಬಳ್ಳಾರಿ ಬೇಗ....."
ಬಳ್ಳಾರಿಗೆ ಇನ್ನು ೪೦ ಕಿಲೋಮೀಟರು ಬಾಕಿಯಿತ್ತು. ಆಗ ಸಮಯ ರಾತ್ರಿ ೧೨ ಗಂಟೆ. ಕೆಲವು ಪೊಲೀಸರು ರಸ್ತೆಯಲ್ಲಿ ಹೋಗಿಬರುತ್ತಿದ್ದ ವಾಹನಗಳ ವಿಚಾರಣೆ ನಡೆಸುತ್ತ ನಿಂತಿದ್ದರು. ಹಾಗೆ ನಮ್ಮ ಬೈಕನ್ನು ನಿಲ್ಲಿಸಿದರು. ಗಾಡಿಯ ಪುಸ್ತಕ ಹಾಗು ಗಾಡಿ ನಡೆಸುತ್ತಿದ್ದ ನನ್ನ ಲೈಸನ್ಸ್ ಕೇಳಿದ್ರು. ಕೊಟ್ವಿ. ಎಲ್ಲ ಸರಿಯಾಗಿ ಇತ್ತು..
"ಯಾಕೆ ಇಷ್ಟು ಹೊತ್ತಿನಲ್ಲಿ ಹೋಗ್ತಾ ಇದ್ದೀರಾ...?"
ನಾವು ಸಮಂಜಸವಾದ ಕಾರಣಗಳನ್ನು ಕೊಟ್ಟೆವು.
ಆಗ ಅವರು... "ಸರಿ, ಇಷ್ಟು ಹೊತ್ತಿನಲ್ಲಿ ಹೋಗೋದು ಸೂಕ್ತವಲ್ಲ, ಇದು ಹೈವೆ (ಹೆದ್ದಾರಿ).. ಬಹಳ ಹುಷಾರ್ ಆಗಿ ಹೋಗ್ಬೇಕು. ಮುಂದೆ ಸ್ವಲ್ಪ ಡೇಂಜರ್ ದಾರಿ ಇದೆ. ನಿಧಾನವಾಗಿ ನೋಡ್ಕೊಂಡು ಹೋಗಿ.." ಎಂದು ಸಲಹೆಯನಿತ್ತರು.
ನಾವು "ಸರಿ ಸರ್" ಎಂದು ಹೇಳಿ.. ನಮ್ಮ ಪಯಣ ಮುಂದುವರೆಸಿದೆವು.
ನಾನು ತುಂಬಾ ನಿಧಾನವಾಗಿ ಗಾಡಿ ನಡೆಸುತ್ತಿದ್ದೆ..
ಹಿಂದೆ ಕೂತಿದ್ದ ನಟ.... "ಲೋ, ಸ್ವಲ್ಪ ಜೋರಾಗಿ ನಡೆಸೋ...ಬೇಗ ಊರು ತಲುಪೋಣ"
ನಾನು : "ನಟ, ಮುಂದೆ ಏನು ಕಾಣಿಸ್ತಾ ಇಲ್ಲ... ಜೋರಾಗಿ ನಡೆಸೋದು ಕಷ್ಟ..."
ನಟ : "
ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೇನೇ....., ಬಿಡು ನಾನೇ ನಡೆಸ್ತೀನಿ..."
ಸರಿ, ನೀನೆ ನಡೆಸು ಬಾ ಅಂತ ಹೇಳಿ ನಾನು ಹಿಂದಕ್ಕೆ ಕುಳಿತೆ.
ಈಗ ನಟ ಗಾಡಿ ನಡೆಸಲು ಶುರು ಮಾಡಿದ.
ಒಂದು ೨ ಕಿಲೋಮೀಟರು ಇದ್ದದ್ರಲ್ಲೇ ಜೋರಾಗಿ ಗಾಡಿ ಸಾಗ್ತಾ ಇತ್ತು...
ಏನಾಯ್ತೋ ಗೊತ್ತಿಲ್ಲ.. ಇಬ್ಬರು ಇದ್ದಕಿದ್ದ ಹಾಗೆ ಮದ್ಯರಸ್ತೆಯಲ್ಲಿ ಬಿದ್ದುಬಿಟ್ಟೆವು...
ಸುತ್ತ ಮುತ್ತ ಒಂದು ನರಪ್ರಾಣಿ ಸಹಿತ ಇಲ್ಲ. ಸುತ್ತಲು ಬರಿ ಕತ್ತಲು ಮಾತ್ರ ಕಾಣಿಸ್ತಿದೆ.
ಹೆದ್ದಾರಿಯ ರಸ್ತೆ ಮದ್ಯದಲ್ಲಿ ಇಬ್ಬರು ಅನಾಥರಾಗಿ ಬಿದ್ದಿದಿವಿ.
ನಟನಿಗೆ ಜಾಸ್ತಿ ಪೆಟ್ಟಾಗಿತ್ತು. ನನಗೂ ಸ್ವಲ್ಪ ಪೆಟ್ಟಾಗಿತ್ತು.
ನಾನು ಬೇಗನೆ ಎದ್ದು, ನಟನನ್ನು ಎಬ್ಬಿಸಿ, ಬೈಕನ್ನು ರಸ್ತೆಯ ಪಕ್ಕಕ್ಕೆ ತಂದು ನಿಲ್ಲಿಸಿದೆ.
ಸ್ವಲ್ಪ ಸಮಯ ನಟನಿಗೆ "ಏನಾಯ್ತು..?" ಎನ್ನುವ ಪ್ರಜ್ಞೆ ಸಹಿತ ಇರಲಿಲ್ಲ. ನಂತರ ನಿಧಾನವಾಗಿ ಚೇತರಿಸಿಕೊಂಡ.
ರಸ್ತೆಯ ಮೇಲೆ ದೊಡ್ಡ ಹುಲ್ಲಿನ ಬಣವೆ ಹಾಕಿದ್ದರು. ಆ ಹುಲ್ಲಿನ ರಾಶಿ ಅರ್ಧ ರಸ್ತೆಯನ್ನು ಆಕ್ರಮಿಸಿತ್ತು. ಆ ಹುಲ್ಲಿನ ರಾಶಿಯು ನಮ್ಮ ಬೈಕಿನ ಒಂದು ಭಾಗವನ್ನು ತಾಕಿದ್ದರಿಂದ ನಾವು ರಸ್ತೆಯಲ್ಲಿ ಬಿದ್ದದ್ದು ಎಂದು ತಿಳಿಯುತು.
ಈ ಅನಾಹುತದ ನಂತರ, ನಟ ಮತ್ತೆ ಬೈಕ್ ನಡೆಸುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಬಹಳ ಗಾಯಗಳಾಗಿದ್ದವು.
ನಾನೇ ಗಾಡಿ ನಡೆಸಲು ಶುರು ಮಾಡಿದೆ. ನಟ ಹಿಂದೆ ಕೂತಿದ್ದ.
ನಾನು ಈಗ ತುಂಬಾ ತುಂಬಾ ನಿಧಾನವಾಗಿ ಜಾಗುರತೆಯಿಂದ ಬೈಕ್ ನಡೆಸುತ್ತಿದ್ದೆ.
ಹಿಂದಿನಿಂದ ನಟ, ನನ್ನ ಬುಜವನ್ನು ಒತ್ತಿ ಹಿಡಿದು ಹೇಳಿದ... "ಲೋ......"
ನಾನು : "ಏನೋ..."
ನಟ : "ನಿಧಾನವಾಗಿ ನಡೆಸೋ..."
ನಾನು ತುಂಬಾ ತುಂಬಾ ನಿಧಾನವಾಗಿ ಬೈಕ್ ನಡೆಸುತ್ತಿದ್ದೆ. ನನ್ನ ಗಾಡಿ ಬಹುಶ ೫ ಕಿಲೋಮೀಟರು ವೇಗದಲ್ಲಿ ಹೋಗುತ್ತಿತ್ತು ಅನ್ಸುತ್ತೆ.
ನಾನು : "ಲೋ ನಟ, ನಾನು ತುಂಬಾ ನಿಧಾನವಾಗೆ ನಡಿಸ್ತಾ ಇದೀನಿ.. ಇದಕ್ಕಿಂತ ನಿಧಾನಾನ...?"
ನಟ : "
ಲೋ, ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ, ಅಸ್ಟು ನಿಧಾನವಾಗಿ ಹೋಗು..ಸ್ವಲ್ಪ ನನ್ನ ಪರಿಸ್ಥಿತಿ ಅರ್ಥ ಮಾಡ್ಕೋ."
ನನಗೆ ಗಂಭೀರವಾದ ಪರಿಸ್ಥಿತಿಯಲ್ಲೂ ನಗು ಬಂತು... ಹತ್ತು ನಿಮಿಷದ ಮುಂಚೆ "
ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೆ" ಎನ್ನುವವನು, ಈಗ "
ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ ಅಸ್ಟು ನಿಧಾನವಾಗಿ ಹೋಗು" ಅಂತ ಇದಾನೆ...
ಅಂತು ಆಮೆ ವೇಗದಲ್ಲಿ ಬಳ್ಳಾರಿಯನ್ನು ಸೇರಿದೆವು.
ನನಗೆ ಅಂಗಾಲಿನ ಮೇಲೆ ಪೆಟ್ಟಾಗಿತ್ತು. ಆ ಪೆಟ್ಟನ್ನು ನನ್ನ ಪ್ಯಾಂಟ್ ಮುಚ್ಚಿಕೊಂಡಿತ್ತು.
ಆದರೆ ನಟನಿಗೆ, ಗಲ್ಲದ ಮೇಲಾಗಿರುವ ಪೆಟ್ಟನ್ನು ಹೇಗೆ ಮುಚ್ಚಿಕೊಳ್ಳುವುದು... ?.
ಪೋಷಕರು "ಬೈಕಿನಲ್ಲಿ ದೂರದ ಪ್ರಯಾಣ ಮಾಡಬೇಡಿ" ಎಂದು ಸಲಹೆ ಕೊಟ್ಟಿದ್ದರು, ನಾವು ಅವರನ್ನು ಸುಮ್ಮನಿರಿಸಿ ಬಂದಿದ್ದೇವೆ. ಈಗ ಅವರಿಗೆ ನಿಜ ಹೇಳಿದರೆ, ಮುಂದೆ ನಮ್ಮನ್ನು ಬೈಕ್ ಹತ್ತಲು ಬಿಡುವರೇ ?... ಹಾಗಾಗೆ ಒಂದು ಸುಂದರ ಸುಳ್ಳು ಹೇಳಲು ಸಿದ್ದವಾದೆವು...
ಕೇಳಿದವರಿಗೆಲ್ಲ... "ದಾರಿಯಲ್ಲಿ, ಒಂದು ಹೋಟೆಲ್ಲಿಗೆ ಹೋದೆವು. ಆ ಹೋಟೆಲ್ ಎರಡು ಮಹಡಿಯನ್ನು ಹೊಂದಿತ್ತು. ನಾವು ಮೇಲ್ಮಹಡಿಗೆ ಹೋಗಲು, ಮೆಟ್ಟಲು ಹತ್ತುತ್ತಿರುವಾಗ ನಟ ಜಾರಿ(ಸ್ಕಿಡ್ ಆಗಿ) ಬಿದ್ದ. ಅದಕ್ಕೆ ನಟನಿಗೆ ಪೆಟ್ಟಾಯ್ತು..." ಅಂತ ಹೇಳಿ ಪ್ರಕರಣವನ್ನು ಮುಚ್ಚಿಹಾಕಿದೆವು. ನಿಜ ಹೇಳಬೇಕೆಂದರೆ, ನಟನಿಗೆ ಗಾಯಗಳು ವಾಸಿಯಾಗಲು ಕೆಲವು ವಾರಗಳು ಹಿಡಿಯಿತು.
ನನಗೆ ಈ ಘಟನೆ ನೆನಪಾದಾಗಲೆಲ್ಲ ನಟ ಆಡಿದ ಮಾತುಗಳನ್ನು ನೆನೆದು ನಗ್ತಾ ಇರ್ತೀನಿ.

ಸಾಗುತ ದೂರ ದೂರ...